


ಬಂಟ್ವಾಳ: ಪಕ್ಕದ ಬಾರ್ ಗೆ ಬಿಯರ್ ಕುಡಿಯಲು ಹೋಗುತ್ತಾನೆ ಎಂದು ಯುವಕನೊಬ್ಬನಿಗೆ ಮೂರು ಜನ ಸೇರಿ ಹಲ್ಲೆ ನಡೆಸಿರುವ ಘಟನೆ ಸಿದ್ಧಕಟ್ಟೆಯಲ್ಲಿ ಸೋಮವಾರ ನಡೆದಿದೆ.
ಹಲ್ಲೆಗೊಳಗಾದವರು ಸಂಗಬೆಟ್ಟು ಗ್ರಾಮದ ಆರಂಬೋಡಿ ನಿವಾಸಿ ಬಾಲರಾಜ್ (26) ಎನ್ನಲಾಗಿದೆ. ಆರೋಪಿಗಳನ್ನು ವೈನ್ ಶಾಪ್ ಮಾಲಕ ಭೋಜಶೆಟ್ಟಿ, ಗಣೇಶ್ ಸಲೂನ್, ನಾಮಸಂತು ಎಂದು ಗುರುತಿಸಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ ಬಾಲರಾಜ್ ರವರು ಸೋಮವಾರದಂದು ರಾಮಚಂದ್ರ ಮತ್ತು ಯಶೋಧರ (ಕುಟ್ಟಿಶೆಟ್ಟಿ) ಯವರೊಂದಿಗೆ ಸಿದ್ಧಕಟ್ಟೆಯಲ್ಲಿರುವ ನವರಂಗ ವೈನ್ ಶಾಪ್ ಗೆ ಹೋಗಿ ಬಿಯರ್ ಕುಡಿಯುತ್ತಿರುವ ವೇಳೆ ವೈನ್ ಶಾಪ್ ಮಾಲಕ ಭೋಜ ಶೆಟ್ಟಿ, ನಾಮ ಸಂತು, ಗಣೇಶ್ ಸಲೂನ್ ರವರು ಬಂದು ಬಾಲರಾಜ್ ರವರಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು, ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪಕ್ಕದ ಬಾರ್ ಗೆ ಬಿಯರ್ ಕುಡಿಯಲು ಹೋಗುತ್ತಿರುವ ದ್ವೇಷದಿಂದಾಗಿ ಆರೋಪಿಗಳು ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



