ಚಿತ್ರದುರ್ಗ: ಪತ್ನಿಯನ್ನು ಕೊಂದು ಮಂಚದ ಕೆಳಗೆ ಹೂತಿಟ್ಟು, ಪತ್ನಿ ನಾಪತ್ತೆಯಾಗಿದ್ದಾಳೆಂದು ಕಥೆ ಕಟ್ಟಿದ ಪತಿರಾಯನನ್ನು ಪೊಲೀಸರು ಬಂಧಿಸಿದ ಘಟನೆ ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಗ್ರಾಮದ ನಾರಪ್ಪ ಎನ್ನಲಾಗಿದೆ. ಕೊಲೆಯಾದ ಮಹಿಳೆ ಸುಮಾ(26) ಎಂದು ಗುರುತಿಸಲಾಗಿದೆ.
ಸುಮಾ ಅವರನ್ನ ಕೋಣನೂರು ಗ್ರಾಮದ ನಾರಪ್ಪಗೆ ಆರು ವರ್ಷಗಳ ಹಿಂದೆ ವಿವಾಹ ಮಾಡಿಕೊಟ್ಟಿದ್ದರು. ಮದುವೆ ಬಳಿಕ ಸುಮಾ, ನಾರಪ್ಪ ದಂಪತಿಗೆ ಒಂದು ಗಂಡು ಮಗು ಕೂಡಾ ಜನಿಸಿ ಐದು ವರ್ಷ ತುಂಬಿದೆ.
ಡಿ. 26ರಂದು ಆರ್. ನಾರಪ್ಪ ಪತ್ನಿಯ ತವರು ಮನೆಗೆ ಹೋಗಿ ಮಗ ನಾರದಮುನಿಯನ್ನು ಬಿಟ್ಟು ಬಂದಿದ್ದ. 27ರಂದು ಮರಳಿ ಕರೆದುಕೊಂಡು ಬಂದಿದ್ದ. ಈ ವೇಳೆ ಜೊತೆಯಲ್ಲಿ ಪತ್ನಿ ಇರಲಿಲ್ಲ. ಡಿ. 28ರಂದು ನಾರಪ್ಪ ತನ್ನ ಮಾವ ಕರಿಯಪ್ಪನಿಗೆ ದೂರವಾಣಿ ಕರೆ ಮಾಡಿ, ‘ಸುಮಾ ಡಿ. 25ರಂದು ರಾತ್ರಿಯಿಂದ ಕಾಣೆಯಾಗಿದ್ದಾಳೆ. ಎಲ್ಲ ಕಡೆ ಹುಡುಕುತ್ತಿದ್ದೇವೆ’ ಎಂದು ತಿಳಿಸಿದ. ತಕ್ಷಣ ಮಾವ ಕರಿಯಪ್ಪ ಕೋಣನೂರಿಗೆ ಬಂದು ಅಳಿಯನೊಂದಿಗೆ ಭರಮಸಾಗರ ಠಾಣೆಗೆ ಹೋಗಿ ಮಗಳು ಸುಮಾ ಕಾಣೆಯಾಗಿರುವ ಬಗ್ಗೆ ದೂರು ನೀಡಿದರು.
ದೂರು ಆಧರಿಸಿ ತನಿಖೆ ಶುರು ಮಾಡಿದ ಪೊಲೀಸರು ದೂರುದಾರ ಸುಮಾಳ ಪತಿ ನಾರಪ್ಪನ ಬಳಿ ಮಾಹಿತಿ ಕಲೆ ಹಾಕಿದ್ದರು. ನಾರಪ್ಪ ಹೇಳಿದ ಮಾಹಿತಿಯ ಜಾಡು ಹಿಡಿದ ಪೊಲೀಸರಿಗೆ ಆರಂಭದಲ್ಲಿಯೇ ಪತಿಯ ಮೇಲೆಯೇ ಅನುಮಾನ ಬಂದಿತ್ತು.
ಇತ್ತೀಚೆಗೆ ನಾರಪ್ಪ ಮನೆಗೆ ಸಿಮೆಂಟ್ ತಂದು ಒಂದಿಷ್ಟು ಕಲ್ಲು ಹಾಕುವ ಕೆಲಸ ಮಾಡಿದ್ದ ಅನ್ನೋದು ಗ್ರಾಮಸ್ಥರಿಂದ ಮಾಹಿತಿ ತಿಳಿದು ಬಂದಿತ್ತು. ಪೊಲೀಸರ ಪ್ರಶ್ನೆಗೆ ಉತ್ತರಿಸಿದ ನಾರಪ್ಪ ಮನೆಯಲ್ಲಿ ಮೆಕ್ಕೆಜೋಳ ಇಟ್ಟಿದ್ದೆ, ಹೆಗ್ಗಣ ಎಳೆದು ಗುಂಡಿ ಮಾಡಿದ್ದಕ್ಕೆ ಸಿಮೆಂಟ್ ಹಾಕಿದ್ದೆ ಎಂದು ಸಬೂಬು ಹೇಳಿ ತಪ್ಪಿಸಿಕೊಂಡಿದ್ದ.
ಆದರೆ ನಾರಪ್ಪ ಹೆಗ್ಗಣದ ಕಥೆ ಹೇಳಿದ್ದೇ ತಡ ಪತ್ನಿ ಕಾಣೆಯಾಗಿದ್ದರಲ್ಲಿ ಇವನದೇ ಕೈವಾಡವಿದೆ ಎಂದು ತೀರ್ಮಾನಿಸಿ ಮನೆಗೆ ಬರುತ್ತೇವೆ ಅಂತ ಪೊಲೀಸರು ಹೇಳಿದ್ದರು. ಮನೆಗೆ ಪೊಲೀಸರು ಬರುತ್ತೇವೆ ಅಂತ ಹೇಳುತ್ತಿದ್ದಂತೆ ನಾರಪ್ಪ ಕಕ್ಕಾಬಿಕ್ಕಿಯಾಗಿದ್ದನು. ಬಳಿಕ ಅಲ್ಲಿಂದ ಹೊರಟವ ತನ್ನ ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದ. ಬಳಿಕ ಸುಮಾ ಪೋಷಕರು ಕೂಡಾ ಅವನ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ಆದರೆ ಕೆಲ ವರ್ಷಗಳವರೆಗೆ ಸುಖ ಸಂಸಾರ ನಡೆಸುತ್ತಿದ್ದ ನಾರಪ್ಪ ಪತ್ನಿಯೊಂದಿಗೆ ಜಗಳ ಮಾಡಲು ಆರಂಭಿಸಿದ್ದನು. ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಸುಮಾ ತನ್ನ ತಮ್ಮನ ಬಳಿ ಹೇಳುತ್ತಿದ್ದಳು. ಅಲ್ಲದೇ ಕಾಣೆಯಾಗಿದ್ದಾಳೆ ಎನ್ನಲಾದ ಡಿಸೆಂಬರ್ 25ರಂದು ರಾತ್ರಿ 10:30 ಸಮಯಕ್ಕೆ ಸುಮಾ ಮನೆಯ ಅಕ್ಕ ಪಕ್ಕದ ಜನರನ್ನು ಮಾತನಾಡಿಸಿದ್ದಳು. ಕಾಣೆಯಾದರೂ ಆಕೆಯ ಚಪ್ಪಲಿ ಮಾತ್ರ ಮನೆಯ ಬಳಿಯೇ ಇದ್ದದ್ದು. ಜೊತೆಗೆ ಇದ್ದಕ್ಕಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದು ಅನುಮಾನಕ್ಕೆ ಸಾಕ್ಷಿ ಸಿಕ್ಕಂತಾಗಿತ್ತು.
ಹೀಗೆ ಎಲ್ಲಾ ಮೂಲಗಳಿಂದಲೂ ಸುಮಾ ಕಾಣೆಯಾಗಿರೋ ಪ್ರಕರಣದ ಹಿಂದೆ ನಾರಪ್ಪನ ಕೈವಾಡ ಇದೆ ಎಂದು ತಿಳಿಯುತ್ತಿದ್ದಂತೆ ಪೊಲೀಸರು ಕೋಣನೂರು ಗ್ರಾಮಕ್ಕೆ ಭೇಟಿ ನೀಡಿ ಮನೆ ಪರಿಶೀಲನೆ ನಡೆಸಿದ್ದರು. ಈ ವೇಳೆ ಸುಮಾ ಅವರ ಶವ ಮನೆಯ ಹಾಲ್ನಲ್ಲಿಯ ಕಬ್ಬಿಣದ ಮಂಚದ ಕೆಳಗೆ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವವನ್ನು ಕಡಪ ಕಲ್ಲಿನ ಕೆಳಗೆ ಹೂತಿಡಲಾಗಿತ್ತು. ಮೇಲೆ ಗೊತ್ತಾಗದಂತೆ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿತ್ತು ಎಂದು ತಿಳಿದುಬಂದಿದೆ.