
ಬೆಂಗಳೂರು: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತುಪ್ಪ ಪೂರೈಕೆ ಮಾಡಿದ್ದ ಬೆಂಗಳೂರಿನ ಕೆಎಂಎಫ್ ಒಕ್ಕೂಟದ ಸಗಟು ಮಾರಾಟಗಾರ ಏಜೆನ್ಸಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ಶ್ರುತಿ ಮಾರ್ಕೆಟಿಂಗ್ ಕಾರ್ಪೊರೇಷನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೆಎಂಎಫ್ ಹೆಚ್ಚುವರಿ ನಿರ್ದೇಶಕ ಡಾ. ಬಿಪಿ ಸುರೇಶ್ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.

ಮೈಸೂರು ಜಿಲ್ಲೆಯ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಹೊಸಹುಂಡಿ ಗ್ರಾಮದಲ್ಲಿ ನಕಲಿ ನಂದಿನಿ ತುಪ್ಪದ ಗೋಡಾನ್ ಪತ್ತೆಯಾಗಿತ್ತು. ಸ್ಥಳೀಯರಿಗೆ ಮೊದಲು ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರಿಗೆ ಈ ಜಾಲದ ಬಗ್ಗೆ ಮಾಹಿತಿ ನೀಡಿದ್ದರು. ಡಿಸೆಂಬರ್ 16ರಂದು ಸ್ಥಳಕ್ಕೆ ಸಮಿತಿ ಸದಸ್ಯರು ಹೋಗಿ ಪರಿಶೀಲಿಸಿದಾಗ ನಕಲಿ ಜಾಲ ಪತ್ತೆಯಾಗಿತ್ತು. ಇಲ್ಲಿ ನಂದಿನ ತುಪ್ಪದ ಕವರ್ ತಯಾರಿಸುವ ಕೆಲಸ, ಅಸಲಿ ನಂದಿನಿ ತುಪ್ಪಕ್ಕೆ ಕಲಬೆರಕೆ ಮಾಡುವ ಕೆಲಸ ಹಾಗೂ ಟಿನ್ಗಳಿಗೆ ತುಂಬುವ ಕೆಲಸ ಮಾಡಲಾಗುತಿತ್ತು.

ತಲಾ 15 ಕೆಜಿ ತೂಕದ ಸುಮಾರು 1,000 ಟಿನ್ಗಳು ದೊರಕಿವೆ. ರಾಶಿಗಟ್ಟಲೆ ವನಸ್ಪತಿ, ಪಾಮ್ ಆಯಿಲ್, ಕಲರಿಂಗ್ ಕೆಮಿಕಲ್, ನಂದಿನಿ ಬ್ರ್ಯಾಂಡ್ ತುಪ್ಪದ ನಕಲಿ ಕವರ್, ಪ್ಯಾಕಿಂಗ್ ಯೂನಿಟ್ ಎಲ್ಲವನ್ನೂ ಕಂಡು ಸಮಿತಿ ಸದಸ್ಯರೂ ಅವಕ್ಕಾಗಿದ್ದಾರೆ. ಕೂಡಲೇ ಪೊಲೀಸರು, ಕರ್ನಾಟಕ ಹಾಲು ಉತ್ಪನ್ನಗಳ ಸಹಕಾರ ಒಕ್ಕೂಟ, ಫುಡ್ ಸೇಫ್ಟಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು.










