ಬೆಳಗಾವಿ: ಪ್ರೇಯಸಿಯ ಪತಿಯನ್ನೇ ಭತ್ತದ ಬಣವೆಯಲ್ಲಿ ಸುಟ್ಟು ಹಾಕಿದ್ಧ ಪ್ರಿಯಕರನನ್ನು ಮಾಳಮಾರುತಿ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಬಗ್ಗೆ ವರದಿಯಾಗಿದೆ.
ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ ಪರಶುರಾಮ ಕುರುಬರ ಬಂಧಿತ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ನಿವಾಸಿ ಸಂತೋಷ ಫರೀಟ್ ಹತ್ಯೆಯಾದ ವ್ಯಕ್ತಿ. ಈತನ ಪತ್ನಿ ಜೊತೆ ಪರಶುರಾಮ ಅನೈತಿಕ ಸಂಬಂಧ ಹೊಂದಿದ್ದ. ಅಲ್ಲದೆ, ಆಕೆಯನ್ನು ತನ್ನ ಜೊತೆ ಮನೆಯಲ್ಲಿ ಇರಿಸಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಅನುಮಾನಗೊಂಡ ಸಂತೋಷ್, ಪತ್ನಿ ಜೊತೆ ಅನೈತಿಕ ಸಂಬಂಧದ ಬಗ್ಗೆ ಸ್ನೇಹಿತ ಪರಶುರಾಮನನ್ನು ಪ್ರಶ್ನಿಸಿದ್ದ.
ಇದರಿಂದ ಕುಪಿತಗೊಂಡ ಪರಶುರಾಮ, ಸಂತೋಷ್ನನ್ನು ಪುಸಲಾಯಿಸಿ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಮಾಲಿನಿ ನಗರದ ಗದ್ದೆಯೊಂದರ ಬಳಿ ಕಂಠಪೂರ್ತಿ ಮದ್ಯಪಾನ ಮಾಡಿಸಿ, ಟವೆಲ್ನಿಂದ ಕತ್ತು ಹಿಸುಕಿ ಸ್ನೇಹಿತನ ಕೊಲೆ ಮಾಡಿದ್ದಾನೆ. ಬಳಿಕ ಭತ್ತದ ಬಣವೆಯಲ್ಲಿ ಮೃತದೇಹ ಸುಟ್ಟು ಹಾಕಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ಪರಶುರಾಮ, ಸಂತೋಷ ಬೈಕ್ನಲ್ಲಿ ತೆರಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮಾಳಮಾರುತಿ ಪೊಲೀಸರು, ಬೈಕ್ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.