ಮಂಗಳೂರು: ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಅಪ್ಪ – ಮಗಳು ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಗಂಜಿಮಠ ಬಳಿಯ ಸೂರಲ್ಪಾಡಿಯಲ್ಲಿ ಈ ಅಪಘಾತ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ರಾಣೆಬೆನ್ನೂರಿನ ಪುಂಡಲೀಕಪ್ಪ (62) ಮತ್ತು ಅವರ ಪುತ್ರಿ ಅಶ್ವಿನಿ (29) ಮೃತ ದುರ್ದೈವಿಗಳು.
ಪುಂಡಲೀಕಪ್ಪ ಅವರಿಗೆ ಅನಾರೋಗ್ಯ ಇದ್ದುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರಿನಲ್ಲಿ ಮಂಗಳೂರಿಗೆ ಕರೆತರಲಾಗುತ್ತಿತ್ತು . ವ್ಯಾಗನಾರ್ ಕಾರಿನಲ್ಲಿ ಕುಟುಂಬ ಸಮೇತ ಜೂನ್ 2ರ ರಾತ್ರಿ ಹೊರಟಿದ್ದು ಮರುದಿನ ನಸುಕಿನ ಜಾವ ಕಾರು ಮೂಡುಬಿದ್ರೆ ಮೂಲಕ ಮಂಗಳೂರಿಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗಂಜಿಮಠ ಬಳಿಯ ಸೂರಲ್ಪಾಡಿಯಲ್ಲಿ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಅಶ್ವಿನಿ ಅವರಿಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪುಂಡಲೀಕ ಅವರನ್ನು ಅಲ್ಲಿಂದ ಬೇರೆ ಕಾರಿನಲ್ಲಿ ಆಸ್ಪತ್ರೆಗೆ ಒಯ್ಯುವ ಮಧ್ಯೆ ಸಾವನ್ನಪ್ಪಿದ್ದಾರೆ. ಅಶ್ವಿನಿ ಪತಿ ಸಂತೋಷ್, ಪುತ್ರಿ ಶ್ರೇಯಾ, ತಾಯಿ ಪುಷ್ಪಾ, ಕಾರು ಚಾಲಕ ಸೊಹೈಲ್ ಗಾಯಗೊಂಡಿದ್ದಾರೆ.