ಪುತ್ತೂರು: ಹಿಂದೂ ಸಂಘಟನೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆ ಆರೋಪಿ ಚರಣ್ ರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಕಿಶೋರ್ ಪೂಜಾರಿ ಕಲ್ಲಡ್ಕ ಹಾಗೂ ತಂಡದ ಕೃತ್ಯ ಎಂದು ತಿಳಿದು ಬಂದಿದೆ.
ಚರಣ್ ರಾಜ್ ತಮ್ಮ ಮಾವ ಕಿಟ್ಟಣ್ಣ ರೈ ಅವರ ಹೊಸ ಮೆಡಿಕಲ್ ಶಾಪ್ ನ ಶುಭಾರಂಭದ ಹಿನ್ನೆಲೆಯಲ್ಲಿ ಪೆರ್ಲಂಪಾಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದೆ.
ಈ ಕುರಿತು ಚರಣ್ ರಾಜ್ ಜತೆಗಿದ್ದ ನವೀನ್ ಕುಮಾರ್ ಎಂಬವರು ಕೊಲೆ ಮಾಡಿದ ತಂಡದಲ್ಲಿದ್ದ ಓರ್ವನನ್ನು ಗುರುತು ಮಾಡಿದ್ದು ಅವರು ಕಿಶೋರ್ ಪೂಜಾರಿ ಕಲ್ಲಡ್ಕ ಎಂದು ಹೇಳಲಾಗಿದೆ. ಈ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆಯ ಪೆರ್ಲಂಪಾಡಿಯಲ್ಲಿ ನಡೆದಿದ್ದು, ನವೀನ್ ಕುಮಾರ್ ನೀಡಿದ ದೂರಿನನ್ವಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೇ ವೈಷಮ್ಯವೇ ಕೊಲೆಗೆ ಕಾರಣ..!
ಚರಣ್ ರಾಜ್ ಮತ್ತು ಕಿರಣ್ ಎಂಬ ಇಬ್ಬರು ಸಹೋರರು ಬಡ್ಡಿ ಮತ್ತು ಚಿಟ್ ಫಂಡ್ ನಡೆಸುತ್ತಿದ್ದರು. ಈ ವೇಳೆ ಹಣಕಾಸಿನ ವಿಚಾರವಾಗಿ ಕಿಶೋರ್ ಪೂಜಾರಿ ಮತ್ತು ಚರಣ್ ರಾಜ್, ಕಿರಣ್ ಎಂಬವರ ನಡುವೆ ವೈಮನಸ್ಸು ಮೂಡಿ ಜಗಳವಾಗಿದೆ. ಜಗಳ ತಾರಕಕ್ಕೆ ಏರಿ ಕಿಶೋರ್ ಪೂಜಾರಿ ತಂಡವು ಚರಣ್ ರಾಜ್ ಮೇಲೆ ಹಲ್ಲೆ ನಡೆಸಿದೆ. ಈ ಹಲ್ಲೆ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವೈಷಮ್ಯ ಬೆಳೆದು ಕಿಶೋರ್ ಪೂಜಾರಿ ಎಂಬಾತನ ಕೊಲೆಗೆ ಚರಣ್ ರಾಜ್ ಸ್ಕೆಚ್ ರೂಪಿಸಿದ್ದಾನೆ. ಚೌತಿಯ ರಾತ್ರಿಯಂದು ಕಿಶೋರ್ ಪೂಜಾರಿ ಕೊಲೆಗೆ ಸಂಚು ರೂಪಿಸಲಾಗಿತ್ತು. ಆದ್ರೆ ಆ ಸ್ಕೆಚ್ಗೆ ಬಲಿಯಾಗಿದ್ದು ಪ್ರಾಮಾಣಿಕವಾಗಿ ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಕಾರ್ತಿಕ್ ಮೇರ್ಲ. ಇದರಿಂದ ನೊಂದಿದ್ದ ಕಿಶೋರ್ ಪೂಜಾರಿ ಚರಣ್ ರಾಜ್ ಎಂಬಾತನ ಕೊಲೆಗೆ ಮತ್ತೆ ಸ್ಕೆಚ್ ಮಾಡಿ ತನ್ನ ತಂಡದೊಂದಿಗೆ ಆಗಮಿಸಿ ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದಾನೆ.
ಇದೀಗ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧನಕ್ಕೆ ಬಲೆ ಬೀಸಿದ್ದಾರೆ.