ಮಂಗಳೂರು: ಚಲಿಸುತ್ತಿದ್ದ ಟೆಂಪೋ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಚಾಲಕ ಅಸುನೀಗಿದ ಘಟನೆ ನಡೆದಿದೆ. ಟೆಂಪೋದಲ್ಲಿದ್ದ ಇನ್ನಿಬ್ರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ನಗರದ ಹೊರವಲಯದ ಮುಲ್ಕಿ ಕೊಲ್ನಾಡು ಕೈಗಾರಿಕಾ ಪ್ರದೇಶದ ಪ್ರಮುಖ ರಸ್ತೆಯಲ್ಲಿ ಸಂಭವಿಸಿದೆ.
ಮೃತ ಚಾಲಕನನ್ನು ಕೆಎಸ್ ರಾವ್ ನಗರ ಲಿಂಗಪ್ಪಯ್ಯ ಕಾಡು, ವಿಜಯಪುರ ಕಾಲೋನಿ ನಿವಾಸಿ ಯಶವಂತರಾಯ ಎಂದು ಗುರುತಿಸಲಾಗಿದೆ. ಹಾಗೂ ಗಾಯಾಳುಗಳನ್ನು ಭಗವಂತರಾಯ ಮತ್ತು ಕುಮಾರ ಎಂದು ಗುರುತಿಸಲಾಗಿದೆ. ಕೂಲಿ ಕೆಲಸಕ್ಕೆ ಬೆಳಗ್ಗೆ ಟೆಂಪೋದಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಕೊಲ್ನಾಡು ಕೈಗಾರಿಕಾ ಪ್ರದೇಶದ ಪ್ರಮುಖ ರಸ್ತೆಯಲ್ಲಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಚಾಲಕ ಹಾಗೂ ಟೆಂಪೋದಲ್ಲಿದ್ದ ಇಬ್ಬರೂ ಕೂಲಿ ಕಾರ್ಮಿಕರು ಟೆಂಪೋದ ಒಳಗೆ ಸಿಲುಕಿಕೊಂಡು ಒದ್ದಾಡುತ್ತಿದ್ದು ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂದರ್ಭ ಟೆಂಪೋ ಚಾಲಕ ಯಶವಂತರಾಯ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.