ಮಂಗಳೂರು : ಸಿಎಎ ಮತ್ತು ಎನ್ಆರ್ಸಿ ಪ್ರತಿಭಟನೆ ಸಂದರ್ಭದಲ್ಲಿ ಕದ್ರಿ ಪೊಲೀಸ್ ಇನ್ಸ್ಪೆಕ್ಟರ್ ಶಾಂತರಾಮ್ ಅವರಿಗೆ ಬೆದರಿಕೆ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿ ಇಬ್ಬರನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಬೊಂಡತಿಲದ ಮಹಮ್ಮದ್ ಶಾಫಿಕ್ (20) ಮತ್ತು 17 ವರ್ಷದ ಸಂಘರ್ಷಕ್ಕೊಳಗಾದ ಬಾಲಕ ಬಂಧಿತರು. 2019 ಡಿಸೆಂಬರ್ 26 ರಂದು ಕದ್ರಿ ಇನ್ಸ್ಪೆಕ್ಟರ್ ಆಗಿದ್ದ ಶಾಂತರಾಮ್ ಅವರಿಗೆ ಆರೋಪಿಗಳು ಕರೆ ಮಾಡಿ ಸಿಎಎ ಮತ್ತು ಎನ್ಆರ್ಸಿ ವಿಚಾರವಾಗಿ ಅವಾಚ್ಯ ಶಬ್ಧಗಳಿಂದ ಬೈದು ಜೀವಬೆದರಿಕೆ ಕರೆ ಮಾಡಿದ್ದರು.
ನಿಂದನೆ ಮತ್ತು ಜೀವಬೆದರಿಕೆ ಕರೆ ಹಿನ್ನೆಲೆಯಲ್ಲಿ ಶಾಂತರಾಮ್ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಒಳಸಂಚು ರೂಪಿಸಿಕೊಂಡು ದ್ವೇಷ ಸಾಧಿಸಲು ಮತ್ತು ಸರ್ಕಾರದ ಕರ್ತವ್ಯವನ್ನು ಸುಲಲಿತವಾಗಿ ನಿರ್ವಹಿಸಲು ಅಡ್ಡಿ ಪಡಿಸಿದ್ದಾರೆ ಎಂದು ದೂರು ನೀಡಿದ್ದರು. ಪ್ರಕರಣವನ್ನು ಸೈಬರ್ ಕ್ರೈಮ್ ಠಾಣೆಗೆ ವರ್ಗಾಯಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಷ್ಟ್ 30ರಂದು ಇಬ್ಬರು ಆರೋಪಿಗಳನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಮುಹಮ್ಮದ್ ಶಾಫಿಕ್ನನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.