
ವಿಟ್ಲ : ಒಕ್ಕೆತ್ತೂರಿನ ಬಡ ಕುಟುಂಬದ ಅನಾರೋಗ್ಯ ಪೀಡಿತ ಬಾಲಕನ ಚಿಕಿತ್ಸೆಗಾಗಿ ವಿಟ್ಲದ ಟೀಂ ಸಂರಕ್ಷಣ್ ತಂಡದ ಸಂದೀಪ್ ಕೇಪು ಎಂಬ ಯುವಕ ವಿಭಿನ್ನ ರೀತಿಯ ವೇಷ ಧರಿಸಿ ಸಹಾಯಹಸ್ತ ಚಾಚುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಒಕ್ಕೆತ್ತೂರಿನ ಮಂಜಲಾಡಿ ನಿವಾಸಿ ಬಡ ಕುಟುಂಬದ ಮಂಜಪ್ಪ ಗೌಡರ ಪುತ್ರ ದಿಗಂತ್(13) ಥಲೆಸೀಮಿಯಾ(ಬಿಳಿ ರಕ್ತ ಕಣಗಳ ಕೊರತೆ)ರೋಗದಿಂದ ಬಳಲುತ್ತಿದ್ದಾನೆ. ಮಂಜಪ್ಪ ಗೌಡರ ಮಗಳ ದೇಹದ ಎಲುಬಿನ ಮಜ್ಜೆಯನ್ನು ಸಹೋದರ ದಿಂಗತ್ ದೇಹಕ್ಕೆ ಶಸ್ತ್ರಚಿಕಿತ್ಸೆ ಮೂಲಕ ನೀಡಬಹುದೆಂದು ಬೆಂಗಳೂರಿನ ವಿಶೇಷ ತಜ್ಞ ವೈದ್ಯರು ತಿಳಿಸಿದ್ದಾರೆ. ಅದರೆ ಲಕ್ಷಗಟ್ಟಲೆ ಹಣ ವ್ಯಯಿಸಲು ಮಂಜಪ್ಪ ಗೌಡರ ಕುಟುಂಬಕ್ಕೆ ಅಸಾಧ್ಯವಾಗಿದೆ. ಅದಕ್ಕಾಗಿ ದಾನಿಗಳ ಸಹಾಯ ಯಾಚಿಸುತ್ತಿರುವ ವಿಚಾರ ವಿಟ್ಲದ ಟೀಂ ಸಂರಕ್ಷಣ್ ತಂಡದ ಕೇಪು ಗ್ರಾಮದ ಕುಕ್ಕೆಬೆಟ್ಟುವಿನ ಕೂಲಿ ಕಾರ್ಮಿಕ ಸಂದೀಪ್ ಕಿವಿಗೆ ಬಿದ್ದಿತ್ತು. ತಕ್ಷಣವೇ ಎಚ್ಚೆತ್ತ ಸಂದೀಪ್ ವಿಭಿನ್ನ ಶೈಲಿಯ ವೇಷ ಧರಿಸಿ ತನ್ನ ತಂಡದ ಜೊತೆ ನವರಾತ್ರಿ ಸಂದರ್ಭದಲ್ಲಿ ಮಂಗಳೂರು, ಪಿಲಿಕುಳ, ಕುದ್ರೋಳಿ, ಪುತ್ತೂರು, ಉಪ್ಪಿನಂಗಡಿ ಮತ್ತು ವಿಟ್ಲ ಸುತ್ತಮುತ್ತ ತಿರುಗಾಟ ನಡೆಸಿದೆ.

ಸಾರ್ವಜನಿಕರಿಂದ ಬಂದ 85ಸಾವಿರ ರೂಪಾಯಿ ಹಣವನ್ನು ದಿಗಂತ್ ಚಿಕಿತ್ಸೆಗಾಗಿ ಆತನ ಪೋಷಕರಿಗೆ ನೀಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ. ಈ ಬಗ್ಗೆ ವಿಟಿವಿ ಜೊತೆ ಟೀಂ ಸಂರಕ್ಷಣ್ ತಂಡದ ಸಂದೀಪ್ ಮಾತನಾಡಿದ್ದಾರೆ. ಕೆಲ ವರ್ಷಗಳಿಂದ ರವಿ ಕಟಪಾಡಿಯವರು ವಿಭಿನ್ನ ಶೈಲಿಯ ವೇಷ ಧರಿಸಿ ಬಡ ಕುಟುಂಬದ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಇವರಿಂದ ಪ್ರೇರಣೆಗೊಂಡ ನಾನು ನಮ್ಮ ಪರಿಸರದ ಬಡ ಕುಟುಂಬಗಳಿಗೆ ಯಾಕೆ ಸಹಾಯ ಮಾಡಬಾರದು ಎಂದು ಯೋಚಿಸಿ ಮೊದಲ ಪ್ರಯತ್ನ ಮಾಡಿದ್ದು ಸಾರ್ವಜನಿಕರ ಸಹಕಾರದಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಟೀಂ ಸಂರಕ್ಷಣ್ ತಂಡದ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಈ ವೇಳೆ ರವಿ ಸಿಂಗೇರಿ, ಸಂದೀಪ್, ಪ್ರಶಾಂತ್, ಉಮೇಶ್, ಕೃಷ್ಣಪ್ರಸಾದ್, ಭರತ್, ಚರಣ್, ವರುಣ, ರೇವತಿ,
ತೀರ್ಥೇಶ್, ನಿಷ್ಮಿತ ಜೊತೆಗಿದ್ದರು. ರೇಷ್ಮಾ ಕಿಶೋರ್, ಗುರುಪ್ರಸಾದ್, ರೋಹಿತ್, ಮತ್ತು ತಂಡ ಸಹಕಾರ ಮಾಡಿದ್ದಾರೆ.

