ರಾಯಚೂರು: 14 ತಿಂಗಳ ಮಗುವಿನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಮಗನನ್ನು ಕಳೆದುಕೊಂಡ ನೋವಲ್ಲೂ ಆತನ ಕಣ್ಣುಗಳನ್ನು ದಾನ ಮಾಡಿ ಹಲವರ ಬದುಕಿಗೆ ಬೆಳಕು ನೀಡಿ ಮಾನವೀಯತೆ ಮರೆದಿದ್ದಾರೆ. ಇಂತಹ ಮನಕಲಕುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿದೆ.
ಗೆಜ್ಜಲಗಟ್ಟಾ ಗ್ರಾಮದ ನಿವಾಸಿ, ಗಣಿ ಕಂಪನಿ ನೌಕರ ಅಮರೇಗೌಡ ಕಾಮರೆಡ್ಡಿ ಮತ್ತು ವಾಣಿ ದಂಪತಿಯು ತಮ್ಮ ಮೂರನೇ ಪುತ್ರ 14 ತಿಂಗಳ ಬಸವಪ್ರಭುವಿನ ಎರಡೂ ಕಣ್ಣುಗಳನ್ನು ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿಗೆ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಗು ಬಸವಪ್ರಭುಗೆ ರಾಯಚೂರು, ಬೆಳಗಾವಿ, ಬೆಂಗಳೂರು ಮತ್ತಿತರ ಕಡೆ ಪಾಲಕರು ಚಿಕಿತ್ಸೆ ಕೊಡಿಸಿದ್ದರು. ಮಗುವನ್ನ ಉಳಿಸಿಕೊಳ್ಳಲೇಬೇಕೆಂದು ಪಾಲಕರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ದೇವರಿಗೂ ಹರಕೆ ಹೊತ್ತಿದ್ದರು. ಆದರೆ ಪ್ರಯೋಜನವಾಗಲೇ ಇಲ್ಲ. ಚಿಕಿತ್ಸೆ ಫಲಿಸದೆ ಎರಡು ದಿನಗಳ ಹಿಂದೆ ಮಗು ಮೃತಪಟ್ಟಿದೆ. ಮಗು ಕಳೆದುಕೊಂಡ ನೋವಲ್ಲೂ ನೇತ್ರದಾನ ಮಾಡಿ ಮಾದರಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮರೇಗೌಡ ಕಾಮರೆಡ್ಡಿ ಮತ್ತು ವಾಣಿ, ‘ನೇತ್ರದಾನಕ್ಕೆ ನಮಗೆ ಯಾರೂ ಸ್ಫೂರ್ತಿ ನೀಡಿಲ್ಲ. ಮೊದಲನೇ ಮಗು ತೀರಿದಾಗ ನಿಗದಿತ ಸಮಯದೊಳಗೆ ಅಂಗಾಂಗ ಮತ್ತು ನೇತ್ರದಾನ ಮಾಡಲು ಸಾಧ್ಯವಾಗಲಿಲ್ಲ. ಬಸವಪ್ರಭು ಮರಣ ಹೊಂದಿದ ತಕ್ಷಣವೇ ಅಂಗಾಗ ಸಹಿತ ನೇತ್ರದಾನ ಮಾಡಲು ಸಿದ್ಧರಾದೆವು. ಆದರೆ, ನಮಗೆ ಸರಿಯಾದ ಮಾಹಿತಿ ಸಿಗದ ಕಾರಣ ನೇತ್ರದಾನವೊಂದನ್ನೇ ಮಾಡಿದ್ದೇವೆ’ ಎನ್ನುತ್ತಾ ಭಾವುಕರಾದರು.