ಮಂಡ್ಯ: ಒಂಟಿ ಮಹಿಳೆಯ ಮೃತದೇಹ ಮಲಗಿದ್ದಲ್ಲೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್ನಂತೆ ಕಂಡುಬಂದಿತ್ತು. ಈ ಕುರಿತು ಪ್ರಾಥಮಿಕ ತನಿಖೆ ನಡೆಸಿದಾಗ ಮೃತರ ಚಿನ್ನಾಭರಣ ಸೇರಿ ಬೆಲೆ ಬಾಳುವ ವಸ್ತುಗಳು ಕಳವುವಾಗಿದ್ದು, ಕೊಲೆ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಮಾರಸಿಂಗನಹಳ್ಳಿ ಗ್ರಾಮದ ಪ್ರೇಮಾ (42) ಎಂಬಾಕೆ ಮೃತಪಟ್ಟ ಮಹಿಳೆ. ಪ್ರೇಮಾಳ ಗಂಡ 10 ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ಒಬ್ಬನೇ ಮಗ ಹಾಗೂ ಸೊಸೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಹೀಗಾಗಿ ಪ್ರೇಮ ಊರಿನಲ್ಲಿ ಒಂಟಿಯಾಗಿ ವಾಸವಿದ್ದರು.
ಶನಿವಾರ ಊರಿಗೆ ಬಂದಿದ್ದ ಮಗ ಸೊಸೆ ಸೋಮವಾರ ಬೆಳಿಗ್ಗೆಯಷ್ಟೇ ವಾಪಸ್ಸಾಗಿದ್ದರು. ಮಂಗಳವಾರ ಬೆಳಿಗ್ಗೆ ಅಕ್ಕಪಕ್ಕದ ಮನೆಯವರು ಎಂದಿನಂತೆ ಎದ್ದು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಈ ವೇಳೆ ಪ್ರೇಮಾ ಮನೆಯಿಂದ ದಟ್ಟ ಹೊಗೆ ಬರುತ್ತಿತ್ತು. ಬೆಂಕಿಯನ್ನು ನಂದಿಸಲು ಅಂತ ಒಳಗೆ ತೆರಳಿದವರಿಗೆ ಶಾಕ್ ಕಾದಿತ್ತು. ರೂಮಿನಲ್ಲಿ ಪ್ರೇಮ ಮಲಗಿದ್ದ ಮಂಚಕ್ಕೆ ಬೆಂಕಿ ಬಿದ್ದಿದ್ದು, ಅಷ್ಟರಲ್ಲಿ ಮೃತದೇಹ ಭಾಗಶಃ ಸುಟ್ಟು ಕರಕಲಾಗಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರಿಗೆ ತನಿಖೆ ವೇಳೆ ಗೊಂದಲಗಳು ಎದುರಾಗಿತ್ತು. ಹಿಂದೊಮ್ಮೆ ಅದೇ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ಅದೇ ಸಮಸ್ಯೆ ಆಗಿರಬಹುದಾ ಅನ್ನೋ ಪ್ರಶ್ನೆ ಉದ್ಭವಿಸಿತ್ತು. ಬಳಿಕ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಹಾಗೂ ಕೆಇಬಿ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಕೆಲವು ಸಾಕ್ಷ್ಯಗಳನ್ನ ಕಲೆ ಹಾಕಿದರು.
ಮನೆಯ ಬೀರು ಬಾಗಿಲು ತೆರೆದಿತ್ತು. ಬಟ್ಟೆಗಳು ಚೆಲ್ಲಾಪಿಲ್ಲಿ ಆಗಿದ್ದವು. ಅದರಲ್ಲಿದ್ದ ಸುಮಾರು 100 ಗ್ರಾಂ ಚಿನ್ನಾಭರಣ, ಒಂದು ಲ್ಯಾಪ್ಟಾಪ್ ಕಳುವಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.