
ಉಡುಪಿ: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದೆ.

ನಾಲ್ಕು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಉಡುಪಿ ಮುಳುಗಡೆ ಕಂಡಿದೆ. ಕಂಡು ಕೇಳರಿಯದ ರೀತಿಯಲ್ಲಿ ನಗರಪ್ರದೇಶ ಮುಳುಗಿದ್ದು, ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಉಡುಪಿ ನಗರವೇ ಜಲಾವೃತವಾಗಿದೆ.

ಉಡುಪಿ ನಗರದ ಪ್ರಮುಖ ಬೀದಿಗಳು ಜಲಾವೃತಗೊಂಡಿದ್ದು, ರಸ್ತೆಯಲ್ಲಿ ನೀರು ತುಂಬಿ ಹರಿದಿದೆ. ಜೊತೆಗೆ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ವಾಹನಗಳು ಸಂಪೂರ್ಣ ಮುಳುಗಿವೆ.

ನಗರದ ಬನ್ನಂಜೆ ಕೊಡವೂರು ಪಾಡಿಗಾರು ಗುಂಡಿಬೈಲು ಪ್ರದೇಶಗಳು ಜಲಾವೃತಗೊಂಡಿವೆ. ನಗರದ ಹೊರವಲಯ ಪೆರ್ಡೂರಿನ ಪುತ್ತಿಗೆ ಪರಿಸರದಲ್ಲಿ ರಸ್ತೆ ಸಂಚಾರ ಬಂದ್ ಆಗಿದೆ. ಇನ್ನು ನಗರದ ತಗ್ಗು ಪ್ರದೇಶದಲ್ಲಿ ಸಿಕ್ಕಿಬಿದ್ದವರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ದೋಣಿಯಲ್ಲಿ ರಕ್ಷಿಸಿದ್ದಾರೆ.

ಹಲವಾರು ಅಂಗಡಿ ಮಳಿಗೆಗಳು, ಅಂಗಡಿ ಗೋದಾಮುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಆವರಣ ಸಂಪೂರ್ಣ ಜಲಾವೃತವಾಗಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಇದೇ ರೀತಿ ಕೃತಕ ನೆರೆ ಸಂಭವಿಸಿದ್ದು ಜಿಲ್ಲೆಯಾದ್ಯಂತ ಇಂದೂ ರೆಡ್ ಅಲರ್ಟ್ ಮುಂದುವರೆದಿದ್ದು, ಮಳೆಯ ಆರ್ಭಟ ಇನ್ನೂ ಮುಂದುವರೆದಿದೆ.










