ಬೆಳ್ತಂಗಡಿ: ತಾಲೂಕಿನ ಉಜಿರೆಯ ಆಸುಪಾಸುಗಳಲ್ಲಿ ಲಾಡ್ಜ್ ಗಳಲ್ಲಿ ಅನೈತಿಕ & ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ ಫೆ.6 ರಂದು ರಾತ್ರಿ ಇಪ್ಪತ್ತಕ್ಕೂ ಅಧಿಕ ಮಂದಿ ಪೊಲೀಸರಿಂದ ದಾಳಿ ನಡೆಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಅಮತೆ ವಿಕ್ರಮ್ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಅವರ ನೇತೃತ್ವದಲ್ಲಿ, ವಿಶೇಷ ತಂಡ ರಚಿಸಿ, ಬಂಟ್ವಾಳ ಉಪ ವಿಭಾಗದ ಅಧಿಕಾರಿಗಳು ಮತ್ತು ಸಿಬಂದಿಗಳ ತಂಡಗಳು ಏಕಕಾಲದಲ್ಲಿ ಎಲ್ಲಾ ಲಾಡ್ಜ್ ಗಳ ಮೇಲೆ ದಾಳಿ ಮಾಡಿದೆ.
ರಿಜಿಸ್ಟರ್ ಗಳನ್ನು ಪರಿಶೀಲಿಸಿ, ಆಧಾರ್ ಕಾರ್ಡ, ಇತರೆ ದಾಖಲೆಗಳನ್ನು ಪರಿಶೀಲಿಸಿ, ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಮಾಹಿತಿ ಪಡೆದಿದೆ. ಇನ್ನು ಮುಂದಿನ ದಿನಗಳಲ್ಲಿ ಲಾಡ್ಜ್ ನಲ್ಲಿ ತಂಗುವ ಪ್ರವಾಸಿಗರು ಮತ್ತು ಭಕ್ತರ ಪೂರ್ಣ ಮಾಹಿತಿ ಪಡೆದು ರೂಮ್ ನೀಡಬೇಕು ಹಾಗೂ ಯಾವುದೇ ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಸೂಕ್ತ ಎಚ್ಚರಿಕೆ ನೀಡಿ ತೆರಳಿದ್ದಾರೆ.
ದಾಳಿ ವೇಳೆ 7ಕ್ಕೂ ಅಧಿಕ ವಾಹನಗಳಲ್ಲಿ 20ಕ್ಕೂ ಅಧಿಕ ಮಂದಿಯ ತಂಡ ಕಾರ್ಯಾಚರಿಸಿತ್ತು ಎಂದು ತಿಳಿದುಬಂದಿದೆ.