ಪುತ್ತೂರು: ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಇಬ್ಬರು ಆರೋಪಿಗಳನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮತ್ತು ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ಸೆ.20ರಂದು ನಡೆದಿದೆ.
ಲಾರಿ ಚಾಲಕ ಬೆಳ್ಳಾರೆ ಗ್ರಾಮ ಕಾವಿನಮೂಲೆ ಅಬ್ದುಲ್ ಖಾದರ್ರವರ ಪುತ್ರ ಖಲಂದರ್(31.ವ) ಹಾಗೂ ಸವಣೂರು ಗ್ರಾಮದ ಮಾಂತೂರು ಅಬ್ದುಲ್ಲಾರವರ ಪುತ್ರ ಝಕಾರಿಯಾ(40.ವ) ಬಂಧಿತ ಆರೋಪಿಗಳು. ನಗರ ಠಾಣಾ ಎಸ್.ಐ ಜಂಬೂರಾಜ್ ಮಹಾಜನ್ ಹಾಗೂ ಸಿಬಂದಿಗಳು ಮಾಣಿ-ಮೈಸೂರು ಹೆದ್ದಾರಿಯ ಪೋಳ್ಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಬಂದ ಸ್ವರಾಜ್ ಮಜ್ದಾ ಲಾರಿ ಯನ್ನು ತಡೆದು ತಪಾಸಣೆ ನಡೆಸಿದಾಗ ಗೋಣಿ ಚೀಲದಲ್ಲಿ ತುಂಬಿಸಿ ಯಾವುದೇ ದಾಖಲೆಯಿಲ್ಲದ ಲಾರಿಯಲ್ಲಿ ಅಕ್ಕಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಅಕ್ಕಿಯನ್ನು ಪುತ್ತೂರಿನ ಕಟ್ಟಡವೊಂದರಿಂದ ತುಂಬಿಸಿ ಮಂಗಳೂರಿಗೆ ಸಾಗಾಟ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿರುವುದಾಗಿ ಪೊಲಿಸರು ಹೇಳಿದ್ದಾರೆ.
ಬಿಪಿಎಲ್ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ ಮೂಲಕ ಉಚಿತವಾಗಿ ದೊರೆಯುವ ಅಕ್ಕಿಯನ್ನು ಖರೀದಿಸಿ ಬಳಿಕ ಕ್ವಿಂಟಾಲ್ ಗಟ್ಟಲೆ ಅಕ್ಕಿಯನ್ನು ಮಂಗಳೂರಿನ ಮಿಲ್ವೊಂದಕ್ಕೆ ಕೊಂಡೊಯ್ದು ಪಾಲಿಷ್ ಮಾಡಿಸಿ ಅಲ್ಲಿಂದ ಅದು ಬ್ರಾಂಡೆಡ್ ಅಕ್ಕಿಯಾಗಿ ಮಾರ್ಪಾಡಾಗಿ ಅಧಿಕ ಬೆಲೆಗೆ ಮಾರಾಟ ಮಾಡುವ ದಂಧೆಯೊಂದು ನಡೆಯುತ್ತಿರುವುದಾಗಿ ಸುದ್ದಿಗಳು ಹರಿದಾಡುತ್ತಿದ್ದು ಇದೀಗ ಪೊಲೀಸರು ಪತ್ತೆ ಮಾಡಿರುವ ಈ ಪ್ರಕರಣಕ್ಕೂ ಅದಕ್ಕೂ ಸಂಬಂಧವಿದೆಯೇ ಎನ್ನುವ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ.
ನ್ಯಾಯಬೆಲೆ ಅಂಗಡಿಗಳಿಂದ ಪಡೆದ ಬಿಪಿಎಲ್ ಪಡಿತರ ಅಕ್ಕಿಯನ್ನು ಅಧಿಕ ಬೆಲೆಗೆ ಮಾರಾಟ ಮಾಡಲೆಂದು ಸಾಗಾಟ ಮಾಡಲಾಗುತ್ತಿದ್ದ ಅಟೋ ರಿಕ್ಷಾಗಳ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿರುವುದಾಗಿ ವರದಿಯಾಗಿದೆ.