ಮದುವೆಯಾದ ಎರಡೇ ದಿನದಲ್ಲಿ ಯುವಕನೊಬ್ಬ ಪತ್ನಿಯ ಮದುವೆ ಸೀರೆಯಲ್ಲಿ ನೇಣಿಗೆ ಶರಣಾದ ಘಟನೆ ಚೆನ್ನೈನ ಚೆಂಗಲ್ಪಟ್ಟು ಎಂಬಲ್ಲಿ ನಡೆದಿದೆ.
ಸರವಣನ್ ಮೃತ ಯುವಕ ಎಂದು ತಿಳಿದು ಬಂದಿದೆ. ಈತ ಓಚೇರಿ ನಿವಾಸಿಯಾಗಿದ್ದು, ನುಂಗುವಚತಿರಂನಲ್ಲಿರುವ ಸ್ಯಾಮ್ಸಂಗ್ ಮೊಬೈಲ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಬಾಲ್ಯದಿಂದಲೇ ಸ್ನೇಹಿತೆಯಾಗಿ ಶ್ವೇತಾ ಎಂಬಾಕೆಯನ್ನು ಕೆಲವು ವರ್ಷಗಳಿಂದ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದರು ಎನ್ನಲಾಗಿದೆ. ಮದುವೆಯನ್ನು ಎರಡೂ ಕುಟುಂಬದವರು ಅದ್ದೂರಿಯಾಗಿ ಏರ್ಪಡಿಸಿದ್ದರು. ನವ ದಂಪತಿ ತಮ್ಮ ಮದುವೆಯ ನಂತರ ಮೊದಲ ಬಾರಿಗೆ ದಿಮ್ಮಾವರಂಗೆ ಬಂದರು ಮತ್ತು ಆ ದಿನ ಅವರ ಮೊದಲ ರಾತ್ರಿಯಾಗಿತ್ತು ಎನ್ನಲಾಗಿದೆ.
ಶ್ವೇತಾಳ ಕಿರುಚಾಟ ಕೇಳಿ ಮನೆಯವರು ಬೆಚ್ಚಿಬಿದ್ದಿದ್ದಾರೆ. ಶ್ವೇತಾ ಕೋಣೆಯಿಂದ ಹೊರಗೆ ಓಡಿ ಪ್ರಜ್ಞೆ ತಪ್ಪಿ ಬಿದ್ದಳು ಎಂದು ತಿಳಿದು ಬಂದಿದೆ. ಆಕೆಯ ಪಾಲಕರು ಕೊಠಡಿಯೊಳಗೆ ಹೋಗಿ ನೋಡಿದಾಗ ಶ್ವೇತಾಳ ಮುಹೂರ್ತದ ಸೀರೆಯನ್ನು ಬಳಸಿ ಸರವಣನ್ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಚೆಂಗಲ್ಪಟ್ಟು ತಾಲೂರು ಪೊಲೀಸರ ತಂಡ ಆತನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಜಿಎಚ್ಗೆ ಕಳುಹಿಸಿದೆ.
ಸರವಣನ್ ತನ್ನ ಪಾಲಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಹನಿಮೂನ್ ಪ್ರವಾಸಕ್ಕಾಗಿ ಯೋಜಿಸಿರುವ ಸ್ಥಳಗಳ ಬಗ್ಗೆ ತಿಳಿಸಿದ್ದ ಎಂದು ಪೋಷಕರು ತಿಳಿಸಿದರು. ಸರವಣನ್ ಸಾವು ತುಂಬಾ ನಿಗೂಢವಾಗಿದೆ. ಚೆಂಗಲ್ಪಟ್ಟು ತಾಲೂಕು ಪೊಲೀಸರು ಅನುಮಾನಾಸ್ಪದ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶ್ವೇತಾ ಮತ್ತು ಅಕೆಯ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.