ಹುಲಿ ವೇಷ ವೆಂದರೆ ಬರಿ ಕುಣಿತವಲ್ಲ, ಇದು ಕರಾವಳಿಯ ಆರಾಧನೆಯ ರೂಪ
ಹಬ್ಬಗಳು ಬಂತೆಂದರೆ ಸಾಕು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಲಿವೇಷದ್ದೇ ಗದ್ದಲ. ಹಿಂದೆಲ್ಲ ಹುಲಿವೇಷ ಎಂದರೆ ಕರಾವಳಿ ಭಾಗ ಹೊರತುಪಡಿಸಿದರೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ.ಈಗ ಎಲ್ಲರಿಗೂ ತಿಳಿದಿದೆ ನಮ್ಮ ಪಿಲಿ ನಲಿಕೆ..
ಪಿಲಿ ನಲಿಕೆ ಎನ್ನುವುದು ಕೇವಲ ಮೋಜು ಮಸ್ತಿ ಸೌಂದರ್ಯಕವಲ್ಲ.. ಅದು ನಮ್ಮ ಕರಾವಳಿಯ ಸಂಸ್ಕೃತಿ, ಆಚಾರ ವಿಚಾರ ನಂಬಿಕೆ…
ಇದೀಗ ಹುಲಿ ವೇಷ ಹಾಕಿದ ಯುವಕನೊಬ್ಬನಿಗೆ ಹುಲಿ ತನ್ನ ಮೈ ಮೇಲೆ ಆವೇಷ ಗೊಂಡು ಆತ ಹುಲಿಯಂತೆ ಮನುಷ್ಯರ ಮೇಲೆ ಆಕ್ರಮಣ ಮಾಡಿದ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಎಲ್ಲರಲ್ಲೂ ಭಕ್ತಿ- ಭಾವದ ಭಾವನೆ ಸೃಷ್ಟಿಯಾಗಿದೆ.
ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಆಸಕ್ತಿ ಅರಳಿಸುವ ಹುಲಿ ನೃತ್ಯ ಮೇಲ್ನೋಟಕ್ಕೆ ಮನರಂಜನೆಯ ವಿಷಯವಾಗಿ ಕಂಡರೂ ಮೂಲತಃ ಇದು ಪ್ರಾರಂಭವಾಗಿದ್ದು ಆರಾಧನೆಯ ರೂಪದಲ್ಲಿ. ನವರಾತ್ರಿ ಮಾತ್ರವಲ್ಲದೆ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಮೆರವಣಿಗೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳಲ್ಲಿ ಹುಲಿವೇಷಗಳನ್ನು ಹಾಕುತ್ತಾರೆ ಎಂಬುದು ನಿಜ. ಆದರೆ ಇಲ್ಲಿನ ದೇವಿ ದೇವಸ್ಥಾನಗಳೇ ಹುಲಿವೇಷದ ಮೂಲ ಮತ್ತು ಆರಾಧನೆಯೇ ಇದರ ಮೂಲ ಉದ್ದೇಶ.
ಹುಲಿ ವೇಷದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ಐತಿಹ್ಯಗಳಿವೆ. ಅವುಗಳಲ್ಲಿ ಒಂದು ಇಲ್ಲಿದೆ. ಅನಾರೋಗ್ಯಕ್ಕೀಡಾದ ತಾಯಿಯೊಬ್ಬಳು ಮಂಗಳೂರಿನ ಹೃದಯಭಾಗದಲ್ಲಿರುವ ಮಂಗಳಾದೇವಿ ದೇವಸ್ಥಾನಕ್ಕೆ ಬಂದು ತಾಯಿ ದೇವಿಯೆದುರು ನಿಂತು, ಅಮ್ಮಾ ನನ್ನ ಮಗುವಿಗೆ ಚರ್ಮದ ಕಾಯಿಲೆ ಇದೆ, ಸರಿಯಾಗಿ ನಡೆಯಲಾಗುತ್ತಿಲ್ಲ. ಮಾತು ಬರುತ್ತಿಲ್ಲ. ನೀನು ನನ್ನ ಮಗುವಿನ ಕಾಲು ಸರಿ ಮಾಡಿಕೊಟ್ಟರೆ, ಬೇಗ ಗುಣಮುಖ ಮಾಡಿದರೆ ಮಗುವಿಗೆ ಹುಲಿ ವೇಷ ಹಾಕಿಸಿ ದೇವಸ್ಥಾನದ ಅಂಗಳದಲ್ಲಿ ನೃತ್ಯ ಮಾಡಿಸುತ್ತೇನೆ ಎಂದು ಹರಕೆ ಹೊತ್ತಳಂತೆ. ಆಶ್ಚರ್ಯವೆಂಬಂತೆ ಮಗು ಸಂಪೂರ್ಣ ಗುಣಮುಖವಾಗುತ್ತದೆ. ಮಗು ಗುಣಮುಖವಾದ ಬಳಿಕ ಮಗುವಿಗೆ ಹುಲಿವೇಷ ಹಾಕಿಸಿ ಹರಕೆ ಸಂದಾಯ ಮಾಡಿದ್ದಳಂತೆ. ಹಿಂದೆ ಹೀಗೊಂದು ಘಟನೆ ನಡೆದಿದ್ದು ಆ ಬಳಿಕ ದೇವಿ ದೇವಸ್ಥಾನಗಳಲ್ಲಿ ಹುಲಿ ಹರಕೆ ಹೇಳುವವರ ಸಂಖ್ಯೆ ಹೆಚ್ಚಾಯಿತು ಎಂಬ ಮಾತು ತುಳುನಾಡಿನಲ್ಲಿ ಪ್ರಚಲಿತದಲ್ಲಿದೆ.
ಅದರಂತೆ ಈಗಲೂ ಮಕ್ಕಳಿಗೆ ಅನಾರೋಗ್ಯವಾದರೆ ದೇವಿ ದೇವಸ್ಥಾನಗಳಿಗೆ ಈ ರೀತಿ ಹರಕೆ ಹೊತ್ತು ಸಲ್ಲಿಸುವ ಸಂಪ್ರದಾಯ ಬೆಳೆದು ಕೊಂಡು ಬಂದಿದೆ. ಕೇವಲ ಮಕ್ಕಳ ವಿಷಯ ಅಂತಲ್ಲ ಹಿರಿಯರು ಸಹ ತಾವಂದುಕೊಂಡಿದ್ದು ನೆರವೇರಿದರೆ ಹುಲಿ ವೇಷ ಹಾಕುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ.
ತುಳುನಾಡಿನ ಪ್ರತಿಯೊಂದು ಆಚರಣೆ, ಸಂಪ್ರದಾಯಗಳಲ್ಲಿ ಅದರದ್ದೇ ಆದ ಧಾರ್ಮಿಕ ಮತ್ತು ಒಳ ದೈವಾರ್ಥಗಳಿರುತ್ತದೆ. ಆ ದೈವತ್ವ, ಶಕ್ತಿ ಸದಾ ಜೊತೆಗಿದ್ದು ಅಭಯ ರಕ್ಷಣೆ ನೀಡುತ್ತದೆ.
ಹುಲಿ ವೇಷ ಅನ್ನೋದು ಕೇವಲ ವೇಷವಲ್ಲ, ಆಡಂಬರ ಅಲ್ಲ, ಅದು ನಮ್ಮ ಸಂಸ್ಕೃತಿ ಆಚಾರ ವಿಚಾರ, ನಂಬಿಕೆ, ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ಸಂಸ್ಕಾರ.