ಯುವಕನ ಪ್ರೀತಿ ತಿರಸ್ಕರಿಸಿದ ಯುವತಿಯನ್ನು ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಹುಲ್ಲೂರು ಗ್ರಾಮದಲ್ಲಿ ನಡೆದಿದೆ. ಅರ್ಪಿತಾ (19) ಮೃತ ದುರ್ದೈವಿ.
ಹುಲ್ಲೂರಿನ ಹನುಂತಪ್ಪನ ಎಂಬವರ ಪುತ್ರಿ ಅರ್ಪಿತಾಳ ಹಿಂದೆ ಅದೇ ಗ್ರಾಮದ ಅಜಯ್ ಹಿಂದೆ ಬಿದ್ದಿದ್ದ. ಅಜಯ್ ಕಳೆದ ಎರಡು ವರ್ಷದಿಂದ ಪ್ರೀತಿಸುವಂತೆ ಅರ್ಪಿತಾಳ ಪೀಡಿಸುತ್ತಿದ್ದ. ಆದರೆ ಅರ್ಪಿತಾ ಆತನ ಪ್ರೀತಿಯ ಬಲೆಗೆ ಬೀಳದೆ ಡಿಪ್ಲೋಮಾ ಮುಗಿಸಿ ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಅಜಯ್ ಕರೆ ಮಾಡಿ ಅರ್ಪಿತಳನ್ನು ಊರಿಗೆ ಕರೆಸಿಕೊಂಡಿದ್ದ ಎನ್ನಲಾಗಿದೆ.
ಇಬ್ಬರ ಭೇಟಿ ವೇಳೆ ಮತ್ತೆ ಪ್ರೀತಿ ವಿಷಯ ಮುನ್ನೆಲೆಗೆ ಬಂದಿದೆ. ಈ ಮಧ್ಯೆ ಅಜಯ್ ಮದುವೆ ಬಗ್ಗೆಯೂ ಪ್ರಸ್ತಾಪಿಸಿದ್ದ ಎನ್ನಲಾಗಿದೆ. ಮದುವೆಗೆ ಅರ್ಪಿತಾ ಒಪ್ಪದೆ ಇದ್ದಾಗ ಅತ್ಯಾಚಾರ ಮಾಡಿ, ಕೊಲೆಗೆ ಯತ್ನಿಸಿದ್ದಾನೆ. ಹಲ್ಲೆಯಿಂದ ಗಾಯಗೊಂಡಿದ್ದ ಅರ್ಪಿತಾಳನ್ನು ಸ್ವತಃ ಅಜಯ್ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯ ಎಸ್.ಎಸ್ ಆಸ್ಪತ್ರೆ ಬಳಿಕ ಶಿವಮೊಗ್ಗ ನ್ಯೂರೋ ಭಾರತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಕೊನೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅರ್ಪಿತಾಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅರ್ಪಿತಾ ಮೃತಪಟ್ಟಿದ್ದಾಳೆ. ಅತ್ಯಾಚಾರ ಎಸಗಿ ಅರ್ಪಿತಾಳನ್ನು ಹತ್ಯೆ ಮಾಡಲಾಗಿದೆ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ಮಗಳನ್ನು ಕಳೆದುಕೊಂಡ ಅರ್ಪಿತಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಯುವತಿ ಇನ್ನಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಅಜಯ್ ಹಾಗೂ ಆತನ ಕುಟುಂಬಸ್ಥರು ಮನೆ ಖಾಲಿ ಮಾಡಿ ಪರಾರಿ ಆಗಿದ್ದಾರೆ. ಆರೋಪಿ ಅಜಯ್ಗೆ ಕಠಿಣ ಶಿಕ್ಷೆ ಆಗಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.