ತಾಯಿಯೊಬ್ಬಳು ನವಜಾತು ಗಂಡು ಶಿಶುವಿಗೆ ಜನ್ಮ ನೀಡಿ ಕಬ್ಬಿನ ಗದ್ದೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಹೊರ ವಲಯದ ಕೆಇಬಿ ಗ್ರೀಡ್ ಬಳಿ ನಡೆದಿದೆ.
ಕಬ್ಬಿನ ಗದ್ದೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿ ತಾಯಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಶಿಶು ಅಳುತ್ತಿದ್ದ ಸದ್ದು ಕೇಳಿದ ಗದ್ದೆಯ ಪಕ್ಕದ ಮನೆಯವರು ಶಿಶುವನ್ನು ರಕ್ಷಿಸಿ ಆರೈಕೆ ಮಾಡಿದ್ದಾರೆ. ಶಿಶುವಿಗೆ ಇರುವೆಗಳು ಕಚ್ಚಲು ಆರಂಭಿಸಿದಾಗ ಶಿಶು ಅಳಲು ಆರಂಭಿಸಿದೆ. ಗದ್ದೆಯಲ್ಲಿ ಸಿಕ್ಕ ಗಂಡು ಮಗು ಅಂದಾಜು ಮೂರು ಕೆಜಿ ತೂಕವಿದೆ.
ಶಿಶುವಿಗೆ ಜನ್ಮ ನೀಡಿದ ಬಳಿಕ ಕರುಳು ಬಳ್ಳಿ ಕತ್ತರಿಕೊಂಡು ಶಿಶುವನ್ನು ಗದ್ದೆಯಲ್ಲೇ ಬಿಟ್ಟು ಹೋಗಿದ್ದಾಳೆ. ಮಗುವನ್ನು ಬಿಟ್ಟು ಹೋದ ತಾಯಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ಸಿಪಿಐ ಶ್ರೀಶೈಲ ಕೌಜಲಗಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಗುವಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.