ಬೆಳ್ತಂಗಡಿ : ಎಟಿಎಂ ಕಾರ್ಡ್ ಬಳಸಲು ತಿಳಿಯದೆ ವ್ಯಕ್ತಿಯೋರ್ವರು ಅಪರಿಚಿತನ ಬಳಿ ಸಹಾಯ ಕೇಳಿ ಆತನು ಎಟಿಎಂ ಬದಲಾಯಿಸಿ ನೀಡಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ ಘಟನೆ ಬೆಳ್ತಂಗಡಿ ಕಸಬಾ ಗ್ರಾಮದಲ್ಲಿ ನಡೆದಿದೆ.
ಮೆಲಂತಬೆಟ್ಟು ನಿವಾಸಿ ಶರೀಫ್ (53) ಎಂಬವರು ಬೆಳ್ತಂಗಡಿ ಕಸಬಾ ಗ್ರಾಮದ ಎಸ್.ಬಿ.ಐ ಎಟಿಎಂ ಯಂತ್ರದಿಂದ ಹಣ ಪಡೆಯಲು ಬಂದಿದ್ದು, ಈ ವೇಳೆ ತನಗೆ ಎಟಿಎಂ ಕಾರ್ಡ್ ಬಳಕೆಯ ಬಗ್ಗೆ ತಿಳಿಯದೇ ಇದ್ದುದರಿಂದ, ಅಲ್ಲೇ ಪಕ್ಕದಲ್ಲಿದ್ದ ಅಪರಿಚಿತ ವ್ಯಕ್ತಿಯ ಕೈಯಲ್ಲಿ ಎಟಿಎಂ ಕಾರ್ಡ್ ನೀಡಿ ಆತನಿಗೆ ಎ.ಟಿ.ಎಂ ಪಿನ್ ಸಂಖ್ಯೆಯೂ ತಿಳಿಸಿ ಹಣ ತೆಗೆದುಕೊಡುವಂತೆ ವಿನಂತಿಸಿಕೊಂಡರು.
ಅಪರಿಚಿತ ವ್ಯಕ್ತಿಯು ಶರೀಫ್ ಅವರಿಗೆ 3 ಸಾವಿರ ರೂಪಾಯಿ ಹಣವನ್ನು ಎ.ಟಿ.ಎಂ ಯಂತ್ರದಿಂದ ತೆಗೆದು ಕೊಟ್ಟಿದ್ದಾರೆ. ಮೂರು ದಿನಗಳ ನಂತರ ಶರೀಫ್ ಅವರ ಖಾತೆಯಿಂದ 1,05,300/- ರೂಪಾಯಿ ಹಣ ಕಡಿತವಾಗಿರುವ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ, ಶರೀಪ್ ಅವರಿಗೆ ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್ ಬದಲಾಯಿಸಿ ನೀಡಿರುವುದು ಬೆಳಕಿಗೆ ಬಂದಿದೆ.
ಘಟನೆ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 35/2024 ಕಲಂ 420, 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.