ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ, ಕೊಡಗಿನ ಎಂ.ಎ.ಗಣಪತಿ ನಾಗರಿಕ ವಿಮಾನಯಾನ ಭದ್ರತಾ ವಿಭಾಗದ (ಬಿಸಿಎಎಸ್) ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಗಣಪತಿ ಅವರು 2024ರ ಫೆಬ್ರವರಿ 29ರಂದು ನಿವೃತ್ತಿಯಾಗಲಿದ್ದು, ಅಲ್ಲಿಯವರೆಗೂ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯ ಕಳುಹಿಸಿರುವ ಗಣಪತಿ ಅವರ ನೇಮಕಾತಿ ಪ್ರಸ್ತಾವನೆಗೆ ಮಂಗಳವಾರ ಪ್ರಧಾನಮಂತ್ರಿ ನೇತೃತ್ವದ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ. ರಾಕೇಶ್ ಅಸ್ಥಾನಾ ಅವರು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರಾಗಿ ನೇಮಕಗೊಂಡ ಬಳಿಕ, ಬಿಸಿಎಎಸ್ ಮುಖ್ಯಸ್ಥರ ಹುದ್ದೆ ಖಾಲಿ ಉಳಿದಿತ್ತು.
1986ರಲ್ಲಿ ಉತ್ತರಾಖಂಡ ಕೇಡರ್ನ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. 2010ರಿಂದ ಕೇಂದ್ರ ಗೃಹ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದ ಗಣಪತಿ ಅವರನ್ನು 2016ರಲ್ಲಿ ಉತ್ತರಾಖಂಡ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಈ ಮೊದಲು ಗೃಹ ಇಲಾಖೆಯ ವಕ್ತಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯ ವಿಶೇಷ ಮಹಾನಿರ್ದೇಶಕರಾಗಿ ಮತ್ತು ವಿಮಾನ ನಿಲ್ದಾಣದ ಮುಖ್ಯಸ್ಥರಾಗಿದ್ದಾರೆ. 30 ವರ್ಷಗಳ ಸೇವೆಯಲ್ಲಿ ಗಣಪತಿ ಅವರು ಸೋನೆಬಾಂದ್ರಾ, ಮೊರಾದಾಬಾದ್ ನಗರ ಮತ್ತು ಹಾರ್ದೊಯಿ ಸೇರಿದಂತೆ ಹಲವೆಡೆ ಕಾರ್ಯನಿರ್ವಹಿಸಿದ್ದಾರೆ. 1999ರಲ್ಲಿ ಸಿಬಿಐನಲ್ಲೂ ಸೇವೆ ಸಲ್ಲಿಸಿದ್ದರು.