ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆಗುವ ವೇಳೆ ರಣಹದ್ದು ಡಿಕ್ಕಿಯಾಗಿದೆ. ಪರಿಣಾಮ ಹೆಲಿಕಾಪ್ಟರ್ ವಿಂಡೋ ಗ್ಲಾಸ್ ಪುಡಿಪುಡಿಯಾಗಿದೆ. ಕೂಡಲೇ ಪೈಲಟ್ ಹೆಲಿಕಾಪ್ಟರ್ನ್ನು ಭೂಸ್ಪರ್ಶ ಮಾಡಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಚಾರ ಹಿನ್ನೆಲೆ ಮುಳುಬಾಗಿಲಿಗೆ ತೆರಳಬೇಕಿತ್ತು. ಹೀಗಾಗಿ ಬೆಂಗಳೂರಿನ ಹೆಚ್ಎಎಲ್ನಿಂದ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್ ಹತ್ತಿದ್ದಾರೆ. ಕೊಂಚ ದೂರ ಸಾಗುತ್ತಿದ್ದಂತೆ ಹೆಲಿಕಾಪ್ಟರ್ಗೆ ರಣಹದ್ದು ಬಡಿದಿದೆ. ಇದರಿಂದ ಹೆಲಿಕಾಪ್ಟರ್ ವಿಂಡೋ ಗ್ಲಾಸ್ ಪುಡಿಪುಡಿಯಾಗಿದ್ದು ತಕ್ಷಣ ಎಚ್ಚೆತ್ತ ಪೈಲೆಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ರಣಹದ್ದು ಬಡಿಯುತ್ತಿದ್ದಂತೆ ಡಿಕೆ ಶಿವಕುಮಾರ್ ಕೆಲ ಸಮಯ ಗಾಬರಿಯಾಗಿದ್ದಾರೆ. ಸದ್ಯ ಯಾವುದೇ ಹಾನಿಯಾಗಿಲ್ಲ.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ದೊಡ್ಡ ಹದ್ದು ಹೆಲಿಕಾಪ್ಟರ್ಗೆ ಗ್ಲಾಸ್ಗೆ ಹೊಡೆಯಿತು. ಹೊಸಕೋಟೆ ಹತ್ತಿರ ತೆರಳುತ್ತಿದ್ದಾಗ ಈ ಘಟನೆ ಆಗಿದೆ. ಘಟನೆಯಿಂದಾಗಿ ಹೆಲಿಕಾಪ್ಟರ್ ಗ್ಲಾಸ್ ಬ್ಲ್ಯಾಸ್ಟ್ ಆಗಿದೆ. ಪೈಲಟ್ ನಿಧಾನವಾಗಿಯೇ ಕೆಳಗೆ ಇಳಿಸಿದ್ದಾರೆ. ಸದ್ಯಕ್ಕೆ ಹೆಚ್ಎಎಲ್ಗೆ ವಾಪಸ್ ಆಗಿದ್ದೇನೆ. ಎಲ್ಲರೂ ಕೂಡ ಸುರಕ್ಷಿತವಾಗಿಯೇ ವಾಪಸಾಗಿದ್ದೇವೆ ಎಂದರು.