ಪುತ್ತೂರು: ತನ್ನ 11ತಿಂಗಳ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಮಹಿಳೆಯೋರ್ವಳು ಪುತ್ತೂರಿನಲ್ಲಿರುವ ಪ್ರಿಯಕರನನ್ನು ಸೇರಿಕೊಂಡಿದ್ದು, ತಡ ರಾತ್ರಿ ಮಹಿಳೆಯ ಮನೆಯವರು ಪುತ್ತೂರಿನ ಕೋಡಿಂಬಾಡಿಯಲ್ಲಿ ಮಹಿಳೆಗಾಗಿ ಹುಡುಕಾಟ ನಡೆಸಿದ ಘಟನೆ ನಡೆದಿದೆ.ಮಹಿಳೆ ಮತ್ತು ಪ್ರಿಯಕರ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಹುಬ್ಬಳ್ಳಿಯ ಮಹಿಳೆಯೋರ್ವರು ಅದೇ ಊರಿನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು ಆತ ಕೋಡಿಂಬಾಡಿ ಭಾಗದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಮಹಿಳೆಯ ಮನೆಯವರಿಗೆ ಮೊದಲೇ ತಿಳಿದಿತ್ತು. ತವರು ಮನೆಯಲ್ಲಿದ್ದ ಆಕೆ ದಿಢೀರನೆ ತನ್ನ ಮಗುವನ್ನು ತೊರೆದು, ಫೋನ್ ಕರೆಯನ್ನು ಸ್ವೀಕರಿಸದೆ ನಾಪತ್ತೆಯಾಗಿದ್ದಳು.
ಆಕೆ ನೇರವಾಗಿ ತನ್ನ ಪ್ರಿಯಕರನ ಬಳಿಗೆ ಬಂದಿರಬಹುದು ಎಂಬ ಶಂಕೆಯಿಂದ ಆಕೆಯ ಮನೆಯವರು ರಾತ್ರಿ ಸುಮಾರು 11 ಗಂಟೆಯ ವೇಳೆ ಪುತ್ತೂರಿನ ಕೋಡಿಂಬಾಡಿಗೆ ಬಂದಿಳಿದ್ದಾರೆ. ಪರಿಚಯವಿಲ್ಲದ ಜನರು ವ್ಯಕ್ತಿಯೋರ್ವನನ್ನು ಹುಡುಕಾಟ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರು ಅವರು ಮಾಹಿತಿ ಪಡೆದುಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧಾರಿಸಿ ಸ್ಥಳಕ್ಕೆ ಬಂದ ಪೊಲಿಸರು ಅವರ ಜೊತೆ ಹುಡುಕಾಟ ಆರಂಭಿಸಿದ್ದಾರೆ. ಆದರೆ ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾತ ಅಲ್ಲಿಂದ ಪರಾರಿಯಾಗಿದ್ದ, ಹುಡುಕಾಟ ಮುಂದುವರೆಸಿದ ಪೊಲೀಸರು ಟವರ್ ಲೊಕೇಶನ್ ಮೂಲಕ ಅವರಿಬ್ಬರೂ ಸಿದ್ಧಕಟ್ಟೆಯಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ.ಈ ಕುರಿತು ಸಿದ್ಧಕಟ್ಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಕೈಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬಂದಿದ್ದ ಮಹಿಳೆ ಹುಬ್ಬಳ್ಳಿಯಿಂದ ಪುತ್ತೂರು ತನಕವೂ ಉಚಿತವಾಗಿಯೇ ಪ್ರಯಾಣ ಬೆಳೆಸಿದ್ದಳು ಎನ್ನಲಾಗಿದೆ. ಪುತ್ತೂರಿಗೆ ಬರಲು ಹಣ ಇಲ್ಲ ಎಂದು ಆಕೆ ಹೇಳಿದಾಗ ಬಸ್ಸು ಫ್ರೀ ಇದೆ ಬಾ ಎಂದು ಆತ ತಿಳಿಸಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಆಕೆ ಅಷ್ಟು ಬೇಗ ನಮ್ಮ ಕಣ್ಣು ತಪ್ಪಿಸಿ ಬರುತ್ತಾಳೆಂದು ತಿಳಿದಿರಲಿಲ್ಲ ಎಂದು ಮಹಿಳೆಯ ತಾಯಿ ಕಣ್ಣೀರು ಹಾಕಿದ್ದಾರೆ.