ಮಾರಕಾಸ್ತ್ರಗಳಿಂದ ಇರಿದು ಯುವಕನ ಕೊಲೆ ಮಾಡಿ ಬಳಿಕ ರಸ್ತೆಯ ಬದಿ ಎಸೆದು ಆರೋಪಿಗಳು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತಪಟ್ಟ ಯುವಕ ಬನಶಂಕರಿ ಮೂಲದ ವಿಜಯ(21) ಎಂದು ಗುರುತಿಸಲಾಗಿದೆ.
ಸ್ನೇಹಿತರಿಂದಲೇ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ಆಟೋದಲ್ಲಿ ಬಂದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.ಕೊಲೆಯಾದ ವಿಜಯ್ ನಿನ್ನೆ ತನ್ನ ಗೆಳೆಯರ ಜೊತೆ ಸೆಲೆಬ್ರೇಷನ್ ಗೆ ಬಂದಿದ್ದ. ರಾತ್ರಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಿ ಕುಡಿದಿದ್ದಾರೆ. ಮನೆಗೆ ಹೋಗುವಾಗ ವಿಜಯ್ ಹಾಗೂ ಗೆಳೆಯರ ಮಧ್ಯೆ ಜಗಳ ಶುರುವಾಗಿತ್ತು. ಆಟೋದಲ್ಲಿ ಹೋಗುವಾಗ ವಿಜಯ್ ಹಾಗೂ ಸ್ನೇಹಿತರು ಜಗಳ ಹೆಚ್ಚು ಮಾಡಿಕೊಂಡಿದ್ದಾರೆ. ಈ ವೇಳೆ ಓರ್ವ ವಿಜಯ್ ಎದೆಗೆ ಚಾಕು ಇರಿದಿದ್ದಾನೆ.
ಚಾಕು ಇರಿದ ಬಳಿಕ ಶ್ರೀನಿವಾಸ್ ನಗರ ಬಸ್ ನಿಲ್ದಾಣದ ಮುಂದೆ ವಿಜಯ್ನನ್ನು ಬಿಸಾಕಿ ಎಸ್ಕೇಪ್ ಆಗಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ವಿಜಯ್ ಸಾವನ್ನಪ್ಪಿದ್ದಾನೆ. ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.