ತಡರಾತ್ರಿವರೆಗೂ ಗೆಳೆಯರೊಂದಿಗೆ ಪಾರ್ಟಿ ಮಾಡಿ ಕಾರಿನಲ್ಲೇ ಮಲಗಿದ್ದ ಯುವಕ ಬೆಳಗಾಗುವ ವೇಳೆಗೆ ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರಿನ ಕುವೆಂಪು ನಗರದಲ್ಲಿ ನಡೆದಿದೆ.
ಪಾರ್ಟಿ ಮುಗಿಸಿ ಕಾರಿನಲ್ಲಿ ಮಲಗಿದ ಚೇತನ್ (24) ಮೃತ ದುರ್ದೈವಿಯಾಗಿದ್ದು, ಮೃತ ಯುವಕ ಬೇಲೂರು ಪಟ್ಟಣದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.
ನಿನ್ನೆ ರಾತ್ರಿ ಮೊಬೈಲ್ ಅಂಗಡಿ ಎದುರು ಬೈಕ್ ನಿಲ್ಲಿಸಿ ಸ್ನೇಹಿತರಾದ ಗೌತಮ್, ದರ್ಶನ್, ಮಿಥುನ್ ಜೊತೆ ಪಾರ್ಟಿಗೆ ತೆರಳಿದ್ದ ಚೇತನ್, ರಾತ್ರಿ ಹನ್ನೆರಡು ಗಂಟೆಯವರೆಗೆ ಮನೆಗೆ ಹೋಗದೆ ಶಾಪ್ ಎದುರು ಕಾರು ನಿಲ್ಲಿಸಿ ಮಲಗಿಕೊಂಡಿದ್ದನಂತೆ.
ರಾತ್ರಿ ಗೌತಮ್ ರೂಂನಲ್ಲಿ ಪಾರ್ಟಿ ಮಾಡಿದ ಸ್ನೇಹಿತರು ಇಂದು ಬೆಳಗ್ಗೆ 10 ಗಂಟೆಗೆ ಬಂದು ಕಾರು ಡೋರ್ ತೆಗೆದು ನೋಡಿದ ಸಂರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.ಕಾರಿನ ಹಿಂಬದಿಯ ಸೀಟ್ನಲ್ಲಿ ರಕ್ತ ವಾಂತಿ ಮಾಡಿಕೊಂಡು ಮಲಗಿದ್ದ ಚೇತನ್ನನ್ನು ಕಂಡು ಗೌತಮ್ ಕ್ಷಣಕಾಲ ಶಾಕ್ಗೆ ಒಳಗಾಗಿದ್ದಾನೆ. ಕೂಡಲೇ ಗೆಳೆಯರಾದ ದರ್ಶನ್, ಮಿಥುನ್ಗೆ ಫೋನ್ ಮಾಡಿ ತಿಳಿಸಿ ಸಹಾಯಕ್ಕೆ ಕರೆದಿದ್ದಾನೆ.ಆದರೆ ಚೇತನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ದರ್ಶನ್, ಮಿಥುನ್ ಇಬ್ಬರು ಫೋನ್ ಸ್ವಿಚ್ ಆಫ್ ಮಾಡಿದ್ದಾರೆ.
ಘಟನೆ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.ಘಟನೆ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತ ಚೇತನ್ ಪೋಷಕರು ತಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.