ಸುಳ್ಯ: 18 ವರ್ಷ ಮೇಲ್ಪಟ್ಟ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕಿನ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಪುನರಾರಂಭ. ನಿನ್ನೆಯಿಂದ ಪ್ರಾರಂಭಗೊ0ಡು ಇಂದು ಆಯಾಯ ಕಾಲೇಜುಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಸೀಮಿತವಾಗಿ ಲಸಿಕಾ ವಿತರಣೆ ಸಮರ್ಪಕವಾಗಿ ನಡೆಯುವ ದೃಷ್ಟಿಯಿಂದ ಎರಡು ದಿನಗಳಿಗೆ ತಾಲೂಕಿನ ಇತರ ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ವಿತರಣೆ ನಿಲ್ಲಿಸಲಾಗಿತ್ತು.
ಸುಳ್ಯ ತಾಲೂಕಿನ ಕಾಲೇಜುಗಳನ್ನು ಬಿಟ್ಟು ಇತರ ಕಡೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಾಳೆಯಿಂದ ಆಯಾಯಾ ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಸೌಲಭ್ಯವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆದ್ಯತೆ ನೀಡಿ ಒದಗಿಸಿಕೊಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಘಟಕ ವತಿಯಿಂದ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ಗಮನಕ್ಕೆ ತರಲಾಯಿತು ಹಾಗೂ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಲಾಯಿತು.
ಇದನ್ನು ಪುರಸ್ಕರಿಸಿದ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮತ್ತೆ ವಿದ್ಯಾರ್ಥಿಗಳಿಗೆ ಆದ್ಯತೆಯನ್ನು ನೀಡಿ ಜುಲೈ 1 ಗುರುವಾರದಿಂದ ವ್ಯಾಕ್ಸಿನೇಷನ್ ಪುನರ್ ಆರಂಭಿಸುವುದಾಗಿ ಹೇಳಿರುವುದಲ್ಲದೆ, ಆದ್ಯತಾ ಪತ್ರದ ಅಗತ್ಯವಿಲ್ಲದೆ ತಮ್ಮ ಕಾಲೇಜಿನ ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಪಡೆದುಕೊಂಡು ಆಯಾಯ ಸಮೀಪದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದುಕೊಳ್ಳುವಂತೆ ಸೂಚಿಸಲಾಯಿತು.
ಒಂದು ವೇಳೆ ದೂರದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದರೆ ಅಥವಾ ಈಗ ತಾನೆ ಕಾಲೇಜುಗಳಿಗೆ ದಾಖಲಾಗಿದ್ದು ಕಾಲೇಜು ಐಡಿ ಹೊಂದಿಲ್ಲದಿದ್ದರೆ ಅಥವಾ ಕಳೆದುಕೊಂಡಿದ್ದರೆ ಎಂಬ ಪ್ರಶ್ನೆಗೆ ಆಯಾಯ ಕಾಲೇಜುಗಳಿಂದ ಆದ್ಯತಾ ಪತ್ರವನ್ನು ಈ ಮೇಲ್ ಮೂಲಕ ಕೂಡಾ ತರಿಸಿಕೊಂಡು ಲಸಿಕೆ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲಾ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಘಟಕ ಅಧ್ಯಕ್ಷರಾದ ಕುಲದೀಪ್ ಪೆಲತ್ತಡ್ಕ, ವೃತ್ತಿ ಶಿಕ್ಷಣ ಪ್ರಮುಖ ವಿಪಿನ್ ಕರ್ಕೇರ, ಎನ್ನೆಂಸಿ ಎಬಿವಿಪಿ ಘಟಕದ ಅಧ್ಯಕ್ಷರಾದ ಚರಣ್ ಅಡ್ಕಬಳೆ, ಹಿರಿಯ ಕಾರ್ಯಕರ್ತ ಲಿಖಿತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.