ಸೇತುವೆ ಮೇಲೆ ಲಾರಿ- ಬಸ್ಸು ಅಪಘಾತವಾಗಿ ಜೀವದ ಹಂಗು ತೊರೆದು ಎದುರಿಗಿದ್ದ 65 ಜನ ಬಸ್ ಪ್ರಯಾಣಿಕರ ಜೀವ ರಕ್ಷಣೆ ಮಾಡುವ ಮೂಲಕ ಎಲ್ಲರಿಂದ ಲಾರಿ ಚಾಲಕನೊರ್ವ ಮೆಚ್ಚುಗೆ ಪಡೆದಿರುವ ಘಟನೆ ಗಂಗಾವತಿ ತಾಲೂಕಿನ ಚಿಕ್ಕಜಂತಗಲ್ ಕಂಪ್ಲಿ ಸೇತುವೆ ಮಧ್ಯೆ ಸಂಭವಿಸಿದೆ.
ಲಿಂಗಸುಗೂರು ದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಕೆಎಸ್ಆರ್ಟಿಸಿ ಹಾಗೂ ಕಂಪ್ಲಿ ಕಡೆಯಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಲಾರಿ ಮಧ್ಯೆ ಅಪಘಾತವಾಗಿದ್ದು ತುಂಗಭದ್ರಾ ನದಿಯ ಸೇತುವೆ ಮಧ್ಯೆ ಭಾಗದಲ್ಲಿ ಘಟನೆ ನಡೆದಿದ್ದರಿಂದ ಬಸ್ ಹಾಗೂ ಲಾರಿ ಎರಡು ಸೇತುವೆಯಿಂದ ಬೀಳುವ ಸಂದರ್ಭದಲ್ಲಿ ಎಚ್ಚೆತ್ತ ಲಾರಿ ಚಾಲಕ ಸುದೀಪ್ಕುಮಾರ ಕೂಡಲೇ ಲಾರಿಯನ್ನು ಸೇತುವೆ ಕಟ್ಟೆಯ ಮೇಲೇರಿಸಿದ್ದರಿಂದ ಪ್ರಪಾತಕ್ಕೆ ಬೀಳಬೇಕಿದ್ದ ಬಸ್ ಸೇತುವೆ ಮೇಲೆ ನಿಂತಿದೆ, ಇದರಿಂದ ಬಸ್ ನಲ್ಲಿದ್ದ 65 ಜನ ಪ್ರಯಾಣಿಕರ ಜೀವ ಉಳಿದಿದೆ.
ಬಸ್ ಬಲ ಭಾಗ ಮತ್ತು ಲಾರಿಯ ಎಡಭಾಗ ಸ್ವಲ್ಪ ಭಾಗ ನಜ್ಜುಗುಜ್ಜಾಗಿದ್ದು ಬಸ್ ಮತ್ತು ಲಾರಿಯಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಒಂದು ವೇಳೆ ಲಾರಿ ಸೇತುವೆಯಿಂದ ಕೆಳಗೆ ಬಿದ್ದರೂ ಒಬ್ಬಿಬ್ಬರಿಗೆ ಅನಾಹುತ ಆಗಬಹುದು, ಬಸ್ ಬಿದ್ದರೆ ಹಲವು ಜನರಿಗೆ ತೊಂದರೆಯಾಗುವುದನ್ನು ಅರಿತು ಸಮಯ ಪ್ರಜ್ಞೆಯಿಂದ ಲಾರಿಯನ್ನು ಸೇತುವೆ ಎಡಭಾಗದ ತಡೆಗೋಡೆ ಮೇಲೆ ಹತ್ತಿಸಿ ನಿಲ್ಲಿಸಿದ್ದಾನೆ. ಇದರಿಂದ ಭಾರಿ ಪ್ರಮಾಣದ ಅನಾಹುತ ತಪ್ಪಿದೆ.
ಬಸ್ ನಲ್ಲಿದ್ದ ಪ್ರಯಾಣಿಕರನ್ನು ಚಿಕ್ಕಜಂತಗಲ್ ಸ್ಥಳೀಯರು ಆಗಮಿಸಿ ರಕ್ಷಿಸಿ ಲಾರಿ ಚಾಲಕ ಮಹಾರಾಷ್ಟ್ರ ಮೂಲದ ಸುದೀಪ್ ಕುಮಾರರನ್ನು ಹಾಡಿ ಹೊಗಳಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಪಿಎಸ್ಐ ಭೇಟಿ ನೀಡಿ ಪರಿಶೀಲಿಸಿ ಸಂಚಾರ ಸುಗಮಗೊಳಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ.