ವಿಟ್ಲ: ಮೆಡಿಕಲ್ ಕಾಲೇಜ್ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ವಿಟ್ಲದ ಮಂಗಳಪದವಿನಲ್ಲಿ ನಡೆದಿದೆ. ಬಸ್ಸಿನಲ್ಲಿದ್ದ ಮಹಿಳಾ ಸಿಬ್ಬಂದಿ ಹಾಗೂ ಬೈಕ್ ಸವಾರ ಗಾಯಗೊಂಡಿದ್ದಾರೆ. ವಿಟ್ಲ ಮಂಗಳಪದವು ಅನಂತಾಡಿ ರಸ್ತೆಯ ಸುರುಳಿಮೂಲೆಯಲ್ಲಿ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ.
ಮoಗಳೂರು ಅತ್ತಾವರ ಖಾಸಗಿ ಆಸ್ಪತ್ರೆಗೆ ಸೇರಿದ ಬಸ್ಸಿನಲ್ಲಿ ವೆನ್ಲಾಕ್, ಕೆಎಂಸಿ, ಮತ್ತು ಲೇಡಿಗೋಶನ್ ಆಸ್ಪತ್ರೆಗೆ ಸೇರಿದ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್ ರಸ್ತೆ ಬದಿಯ ಪ್ರಪಾತದ ಬಳಿ ವಾಲಿನಿಂತಿದೆ. ಬಸ್ಸಿನಲ್ಲಿದ್ದ ಮೂವರು ಸ್ಟಾಫ್ ನರ್ಸ್ ಮತ್ತು ಬೈಕ್ ಸವಾರ ಗಾಯಗೊಂಡಿದ್ದಾರೆ. ಎಲ್ಲರನ್ನೂ ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ಸಿನಲ್ಲಿ ಸುಮಾರು13 ಮಂದಿ ಪ್ರಯಾಣಿಸುತ್ತಿದ್ದರು. ಮಂಗಳೂರು ಕಡೆಗೆ ಮಂಗಳಪದವು, ಅನಂತಾಡಿ, ಮಾಣಿ ಕಡೆಯ ಸ್ಟಾಫ್ ನರ್ಸ್ ಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬೈಕ್ ಸವಾರ ಇರಂದೂರು ಪಡೀಲ್ ನಿವಾಸಿ ಜಾಕೀರ್ ಎಂದು ಗುರುತಿಸಲಾಗಿದೆ. ಅಪಘಾತದಿಂದ ಬಸ್ ರಸ್ತೆ ಬದಿಯ ಮರದ ಬುಡದಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿoದ ಭಾರೀ ಅನಾಹುತ ತಪ್ಪಿದೆ. ಪಕ್ಕದಲ್ಲಿ ಪ್ರಪಾತ ಇದ್ದು, ಮಹಿಳೆಯೊಬ್ಬರು ಕೆಳಗಡೆ ಉರುಳಿ ಬಿದ್ದಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.