ಬಹುಭಾಷಾ ನಟ ಪ್ರಕಾಶ್ ರಾಜ್ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಸಿನಿಮಾಗಳಿಂದ ಮಾತ್ರವಲ್ಲದೆ ಆತ ವಿವಾದಾತ್ಮಕ ಹೇಳಿಕೆಗಳಿಂದಲೇ ಎಷ್ಟೋ ಬಾರಿ ಸುದ್ದಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅನೇಕ ಬಾರಿ ಪ್ರಕಾಶ್ ರಾಜ್ ಕಾಮೆಂಟ್ ಮಾಡಿ ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿ ಸಾಕಷ್ಟು ಬಾರಿ ಟ್ರೋಲ್ ಕೂಡಾ ಆಗಿದ್ಧಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಚಂದ್ರಯಾನ-3 ಕೈಗೊಂಡಿದ್ದು, ಇನ್ನೇನು ಎರಡು-ಮೂರು ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ. ಚಂದ್ರಯಾನ-3 ಅಂಗವಾಗಿ ಚಂದ್ರನ ಕಕ್ಷೆ ಸೇರಿದ್ದ ನೌಕೆ ಈಗಾಗಲೇ ಅಲ್ಲಿನ ಫೋಟೋ ಕಳಿಸಿತ್ತು. ಅದನ್ನು ಇಸ್ರೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಆ. 23ರಂದು ಚಂದ್ರಯಾನ-3 ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲಿದ್ದು, ಇದಕ್ಕಾಗಿ ವಿಜ್ಞಾನಿಗಳು ಹಾಗೂ ಪ್ರತಿ ಭಾರತೀಯರೂ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಸಮಯದಲ್ಲಿ ಪ್ರಕಾಶ್ ರಾಜ್ ಚಂದ್ರಯಾನವನ್ನೇ ಅಪಹಾಸ್ಯ ಮಾಡುವಂತೆ ತಮ್ಮ ಟ್ವಿಟ್ಟರ್ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು ಹಲವರನ್ನು ಬೇಸರಗೊಳ್ಳುವಂತೆ ಮಾಡಿದ್ದು, ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ.
ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್ ಲುಂಗಿ ತೊಟ್ಟು, ಎರಡೂ ಕೈಗಳಲ್ಲಿ ಚಹಾವನ್ನು ಬೆರೆಸುವ ಕಾರ್ಟೂನ್ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, ”ತಾಜಾ ಸುದ್ದಿ; ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಲ್ಲರೂ ಪ್ರಕಾಶ್ ರಾಜ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದು ಇಸ್ರೋಗೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅಪಮಾನ ಎಂದು ಹಲವರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದಾರೆ.
ಈ ಟ್ವಿಟ್ ನ್ನು ಅನೇಕರು ಟೀಕಿಸಿದ್ದಾರೆ. ಭಾರತದ ಹೆಮ್ಮೆಯಾಗಿರುವ ‘ಚಂದ್ರಯಾನ-3′ ಬಗೆಗಿನ ಇಂತಹ ಟ್ವಿಟ್ ಗೆ ನೆಟ್ಟಿಗರು ಗರಂ ಆಗಿದ್ದಾರೆ. ಇದು “ಕುರುಡು ದ್ವೇಷ’ ವೆಂದು ಒಬ್ಬರು ಟ್ವಿಟ್ ಮಾಡಿದ್ದಾರೆ. ಪ್ರಕಾಶ್ ಜೀ, ಈ ಚಂದ್ರಯಾನ್ ಮಿಷನ್ ಇಸ್ರೋದಿಂದ ಬಂದದ್ದು ಬಿಜೆಪಿಯಿಂದಲ್ಲ. ಅದು ಯಶಸ್ವಿಯಾದರೆ ಅದು ಯಾವುದೇ ಪಕ್ಷಕ್ಕೆ ಅಲ್ಲ ಭಾರತಕ್ಕೆ ಎಂದು ಮತ್ತೊಬ್ಬರು ಟ್ವಿಟ್ ಮಾಡಿದ್ದಾರೆ.
ಇಷ್ಟು ದಿನಗಳ ಕಾಲ ನೀವು ಮೋದಿ, ಆರ್ಎಸ್ಎಸ್ ಮಾತ್ರ ದ್ವೇಷ ಮಾಡುತ್ತೀರಿ ಎಂದುಕೊಂಡಿದ್ದೆ, ಆದರೆ ಚಂದ್ರಯಾನ 3 ನಮ್ಮ ದೇಶದ ಪ್ರತಿಷ್ಠೆ. ಅದರ ಮೇಲೂ ಜೋಕ್ ಮಾಡ್ತಿದ್ದೀರ. ನಿಮಗೂ, ಆ ಕೆಟ್ಟ ಮನಸ್ಥಿತಿಗೊಂದು ದೊಡ್ದ ನಮಸ್ಕಾರ, ನಮ್ಮ ದೇಶದ ಏಳಿಗೆ ಕಂಡು ನಿಮಗೆ ಸಹಿಸೋಕೆ ಆಗ್ತಿಲ್ಲ ನೀವು ಭಾರತದವರೇನಾ? ಚಂದ್ರಯಾನ 3 ವಿಚಾರದಲ್ಲೂ ರಾಜಕೀಯವನ್ನು ಎಳೆ ತರುವುದು ಸರಿಯಲ್ಲ ಎಂದು ಟ್ವಿಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.