ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಅಕ್ರಮ ಕಟ್ಟಡ ತಲೆ ಎತ್ತಿದ್ದರೂ ಸ್ಥಳೀಯ ಆಡಳಿತ ಕಣ್ಣು ಮುಚ್ಚಿಕುಳಿತಿದಿದೆ ಎಂಬ ಆರೋಪ ಕೇಳಿಬಂದಿದೆ. ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ನ ಉಪಾಧ್ಯಕ್ಷನ ಮನೆ ಸಮೀಪದಲ್ಲೇ ಕಾನೂನು ಗಾಳಿಗೆ ತೂರಿ ಅಕ್ರಮ ಕಟ್ಟಡ ನೆಲೆಯೂರಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಟ್ಲ ಪಡ್ನೂರು ಪಂ.ವ್ಯಾಪ್ತಿಯ ಕೊಡಂಗಾಯಿ ಜಂಕ್ಷನ್ ನಲ್ಲಿ ಉಪಾಧ್ಯಕ್ಷರ ಮನೆಯಿಂದ ಕೇವಲ 70 ಮೀಟರ್ ಅಂತರದಲ್ಲಿ ಗಾಣದ ಮೂಲೆ ಎಂಬಲ್ಲಿಗೆ ಸಂಪರ್ಕವಾಗುವ ಕವಲು ರಸ್ತೆಯಿದ್ದು ಕೆಲಸಮಯಗಳ ಹಿಂದಷ್ಟೇ ಕಾಂಕ್ರಿಟೀಕರಣವಾಗಿದೆ. ಇದೇ ರಸ್ತೆಯ ಆರಂಭದಲ್ಲೇ ಇತ್ತೀಚೆಗೆ ಹೆದ್ದಾರಿಗೆ ತಾಗಿಕೊಂಡೇ ಅಕ್ರಮ ಕಟ್ಟಡವೊಂದು ರಾಜಾರೋಷವಾಗಿ ತಲೆಯಿತ್ತಿದೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.
ರಾಜ್ಯ ಹೆದ್ದಾರಿ ಬದಿಯಲ್ಲಿ 25ಮೀಟರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ 40ಮೀಟರ್ ವ್ಯಾಪ್ತಿಯೊಳಗೆ ಕಟ್ಟಡ ನಿರ್ಮಿಸುವಂತಿಲ್ಲ. ಕಟ್ಟಡ ರಚನೆಗೆ ಸ್ಥಳೀಯ ಪಂ.ಗಳು ಪರವಾನಿಗೆ ನೀಡುವಂತಿಲ್ಲ ಎಂಬ ಸ್ಪಷ್ಟ ಆದೇಶವನ್ನು ಸುಪ್ರೀಂಕೋರ್ಟ್ 1999ರಲ್ಲಿ ನೀಡಿದ್ದರೂ ಹೆದ್ದಾರಿ ಅಧಿಕಾರಿಗಳು ಮತ್ತು ಸ್ಥಳೀಯ ಪಂ.ನ ಆಡಳಿತ, ಪಿಡಿಒಗಳು ಎಚ್ಚರಗೊಂಡಿಲ್ಲ. ಸುಪ್ರೀಂಕೋರ್ಟ್ ಆದೇಶವನ್ನೇ ಇವರೆಲ್ಲಾ ಗಾಳಿಗೆ ತೂರಿರುವುದು ಇಲ್ಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನಾದರೂ ಪಂ.ಆಡಳಿತ, ಹೆದ್ದಾರಿ ಅಧಿಕಾರಿಗಳು ಅಕ್ರಮ ಕಟ್ಟಡವನ್ನ ತೆರವು ಮಾಡಿ ಗಾಣದಮೂಲೆ ಪರಿಸರ ವಾಸಿಗಳ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ಇಲ್ಲವಾದಲ್ಲಿ ತಮ್ಮ ವಿರುದ್ಧ ಸೂಕ್ತ ಪ್ರಾಧಿಕಾರದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಲು ಹಿಂಜರಿಯುವುದಿಲ್ಲ ಎಂದು ಗಾಣದಮೂಲೆ ಪರಿಸರ ನಿವಾಸಿಗಳು ಎಚ್ಚರಿಸಿದ್ದಾರೆ.