ಠಾಣೆಗೆ ಶರಣಾದ ಆರೋಪಿಗಳು; ಪೋಲೀಸ್ ಉನ್ನತ ಅಧಿಕಾರಿಗಳು ದೌಡು..!
ಪುತ್ತೂರು: ಕಲ್ಲೇಗ ಟೈಗರ್ಸ್ ತಂಡದ ನಾಯಕ ಅಕ್ಷಯ್ ಕಲ್ಲೇಗ (26) ಹತ್ಯೆಯ ಮೂರನೇ ಪ್ರಮುಖ ಆರೋಪಿಯು ಇಂದು (ನ. 7) ಮುಂಜಾನೆ ಪೊಲೀಸರಿಗೆ ಶರಣಾಗಿದ್ದು ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ಮೂವರು ಸದ್ಯ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊರ್ವ ಆರೋಪಿಯು ಕೆಲವೇ ಕ್ಷಣಗಳಲ್ಲಿ ಪೊಲೀಸರಿಗೆ ಶರಣಾಗಲಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬನ್ನೂರು ಜೈನರ ಗುರಿ ನಿವಾಸಿಗಳಾದ ಚೇತು ಅಲಿಯಾಸ್ ಚೇತನ್, ಮಂಜು ಯಾನೆ ಮಂಜುನಾಥ ಹಾಗೂ ಪಡೀಲು ನಿವಾಸಿ ಮನೀಶ್ ಮಣಿಯಾಣಿ ಪೊಲೀಸ್ ವಶದಲ್ಲಿರುವವರು. ಇನ್ನೊರ್ವ ಶಂಕಿತ ಕೇಶವ ಎಂಬಾತ ಇನ್ನಷ್ಟೆ ಪೊಲೀಸರಿಗೆ ಶರಣಾಗಬೇಕಿದೆ.
ನ 6ರಂದು ತಡ ರಾತ್ರಿ 11.30ರ ಸುಮಾರಿಗೆ ಅಕ್ಷಯ್ ಹತ್ಯೆ ನಡೆದಿತ್ತು. ಮೂಲಗಳ ಪ್ರಕಾರ ನಿನ್ನೆ ಸಂಜೆ ನೆಹರೂ ನಗರ ಸಮೀಪ ಬೈಕೊಂದು ಪಾದಾಚಾರಿಗೆ ಢಿಕ್ಕಿ ಹೊಡೆದಿತ್ತು. ಬೈಕ್ ಸವಾರ ಆರೋಪಿ ಚೇತನ್ ಸ್ನೇಹಿತನಾಗಿದ್ದರು. ಗಾಯಾಳು ಅಕ್ಷಯ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸಾ ವೆಚ್ಚ ರೂ 1800 ಆಗಿತ್ತು ಎಂದು ಹೇಳಲಾಗುತ್ತಿದೆ. ಒಟ್ಟು 2 ಸಾವಿರ ರೂ ಪಾವತಿಸುವಂತೆ ಗಾಯಾಳು ಕಡೆಯಿಂದ ಆಕ್ಷಯ್ ಬೈಕ್ ಸವಾರನಿಗೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಅಷ್ಟು ಹಣ ಪಾವತಿಸಲು ಒಪ್ಪದ ಚೇತನ್ ಕೇಸಿನಲ್ಲಿ ನೋಡುವ ಎಂದು ತಿಳಿಸಿದ್ದು, ಈ ವಿಚಾರವಾಗಿ ಈ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿದು ಬಂದಿದೆ.
ಇದರ ಮುಂದುವರಿದ ಭಾಗವಾಗಿ ನಿನ್ನೆ ತಡರಾತ್ರಿ ಚೇತನ್ ಸ್ನೇಹಿತ ಮನೀಶ್ ಅವರು ಅಕ್ಷಯ್ ಗೆ ಕರೆ ಮಾಡಿ ಮಾತುಕತೆಗೆ ನೆಹರೂ ನಗರಕ್ಕೆ ಬರಲು ತಿಳಿಸಿದ್ದರು. ಚೇತನ್ ಮತ್ತು ತಂಡದವರು ನ್ಯಾನೋ ಕಾರಿನಲ್ಲಿ ನಗರಕ್ಕೆ ಆಗಮಿಸಿದ್ದು ಆಕ್ಷಯ್ ಬೈಕಿನಲ್ಲಿ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಅಕ್ಷಯ್ ಜತೆ ಇನ್ನಿಬ್ಬರು ಬಂದಿದ್ದರು, ಅವರು ದಾಳಿಯ ವೇಳೆ ಓಡಿ ತಪ್ಪಿಸಿಕೊಂಡರು ಎಂದು ಹೇಳಲಾಗುತ್ತಿದ್ದು ಇದು ಖಚಿತಗೊಂಡಿಲ್ಲ. ಅಕ್ಷಯ್ ಬೈಕ್ ನಲ್ಲಿ ಇದ್ದಾಗಲೇ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಮೊದಲು ಅಕ್ಷಯ್ ಕೈಗೆ ಮಾರಾಕಯುದ್ದದಿಂದ ದಾಳಿ ಮಾಡಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಅಕ್ಷಯ್ ನೋಡಿದಾಗ ಬೆನ್ನಟ್ಟಿದ್ದ ತಂಡ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಕುತ್ತಿಗೆ ಹಾಗೂ ಕಾಲಿಗೆ ಕಡಿದು ಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಪೊಲೀಸ್ ಠಾಣೆಯವರು ಆಳವಡಿಸಿದ ಸಿಸಿಟಿವಿ ಅಡಿಯಲ್ಲಿಯೇ ಹತ್ಯೆ ನಡೆದಿದ್ದು ದುರ್ದೈವವೆಂದರೇ ಹಲವು ವರ್ಷಗಳಿಂದ ಸಿಸಿಟಿವಿ ಕೆಟ್ಟು ನಿಂತು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಆದರೇ ಕೇವಲ 2 ಸಾವಿರ ರೂಪಾಯಿ ವಿಚಾರವಾಗಿ ಎರಡು ತಂಡಗಳು ಗಲಾಟೆ ಮಾಡಿಕೊಂಡಿವೆ ಎಂಬ ವಿಚಾರವನ್ನು ನಂಬುವ ಸ್ಥಿತಿಯಲ್ಲಿ ಸಾರ್ವಜನಿಕರು ಹಾಗೂ ಎರಡು ತಂಡದ ಆಪ್ತ ಬಳಗ ತಯಾರಿಲ್ಲ. ಆರೋಪಿಗಳ ಪೈಕಿ ಓರ್ವ ಈ ಹಿಂದೆ ಅಕ್ಷಯ್ ಅವರ ಹುಲಿ ತಂಡದ ಜತೆ ಆತ್ಮೀಯ ಒಡನಾಟ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ. ಆದರೇ ಈ ಬಾರಿ ಮಾತ್ರ ಆತ ಈ ತಂಡದಿಂದ ಬೆರ್ಪಟ್ಟಿದ್ದ ಎನ್ನಲಾಗಿದೆ. ಆರೋಪಿಗಳ ಪೈಕಿ ಇನ್ನೊರ್ವ ಇನ್ನೊಂದು ಹುಲಿ ತಂಡದ ಜತೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.