ಮಕ್ಕಳಿಂದ ಕುರಾನ್ ಪಠಣೆ ಮಾಡಿಸಿರುವ ಆರೋಪ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಜ್ಞಾನ ಸಾಗರ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕೇಳಿ ಬಂದಿದೆ. ಈ ಸಂಬಂಧ ಶಾಲೆ ವಿರುದ್ಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿವೆ.
ಬಕ್ರಿದ್ ಹಬ್ಬದ ಹಿಂದಿನ ದಿನ ಶಾಲೆಯ ನೂರಾರು ಮಕ್ಕಳನ್ನು ಒಟ್ಟಿಗೆ ಸೇರಿಸಿ ಮುಸ್ಲಿಂ ಧರ್ಮದ ಶ್ಲೋಕ ಹೇಳಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಲಾ ಆಡಳಿತ ಮಂಡಳಿ, ಮಕ್ಕಳಿಂದ ಪ್ರಾರ್ಥನೆ ಮಾಡಿಸಿಲ್ಲ. ಕೇವಲ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಆಚರಣೆ ನಡೆದಿದೆ ಎಂದು ಹೇಳಿದೆ.
ಸಾಮೂಹಿಕವಾಗಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇವಲ ಮೂರು ಮುಸ್ಲಿಂ ಮಕ್ಕಳು ಮಾತ್ರ ಪ್ರಾರ್ಥನೆ ಮಾಡಿವೆ. ಬೇರೆ ಮಕ್ಕಳಿಂದ ಪ್ರಾರ್ಥನೆ ಮಾಡಿಸಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವೈರಲ್ ಆಗಿರುವ ವಿಡಿಯೋಗೆ ಸ್ಪಷ್ಟನೆ ನೀಡಿದೆ.
ನಾವು ಶಾಲೆಯಲ್ಲಿ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ಕೇವಲ ಮುಸ್ಲಿಂ ಹಬ್ಬ ಮಾತ್ರವಲ್ಲ ಎಲ್ಲಾ ಧರ್ಮದ ಹಬ್ಬಗಳ ಪರಿಚಯ ಮಾಡಲು ಸಾಂಕೇತಿಕ ಆಚರಣೆ ಮಾಡಲಾಗುತ್ತಿದೆ. ಈಗ ನೀವು ಬೇಡ ಅಂದ್ಮೇಲೆ ನಾವು ಆಚರಣೆ ಮಾಡಿಸಲ್ಲ ಎಂದು ಶಿಕ್ಷಕ ವರ್ಗ ಹೇಳಿದೆ. ಮಕ್ಕಳು ಕಾರ್ಯಕ್ರಮ ನೀಡುತ್ತಿರುವ ಇನ್ನುಳಿದವರು ಗಲಾಟೆ ಮಾಡಬಾರದು ಅಂತ ಕಣ್ಣುಚ್ಚಿ ಕುಳಿತುಕೊಳ್ಳಲು ಸೂಚನೆ ನೀಡಲಾಗಿತ್ತು. ಕುರಾನ್ ಪಠಣೆ ಮಾಡಿಸಿದೆಯಾ ಅಥವಾ ಇಲ್ವಾ ಎಂಬುದನ್ನು ಮಕ್ಕಳನ್ನು ಕೇಳಿ ತಿಳಿದುಕೊಳ್ಳಿ, ಇದು ಕೇವಲ ಮೂರು ಮಕ್ಕಳಿಂದ ನಡೆದ ಕಾರ್ಯಕ್ರಮವಾಗಿದೆ. ನಿಮಗೆ ಅನುಮಾನ ಇದ್ರೆ ಮಕ್ಕಳ ಜೊತೆ ಮಾತನಾಡಬಹುದು ಎಂದು ಶಿಕ್ಷಕರು ಹೇಳಿದ್ದಾರೆ.
ಶಾಲೆಯಲ್ಲಿ ಮುಸ್ಲಿಂ ಧರ್ಮ ಸಾಮೂಹಿಕ ಆಚರಣೆ ಖಂಡಿಸಿ ಸೋಮವಾರ ಹೋರಾಟಕ್ಕೆ ಹಿಂದೂಪರ ಸಂಘಟನೆಗಳು ಕರೆ ನೀಡಿದೆ. ಸದ್ಯ ಶಾಲೆಯ ಈ ಕಾರ್ಯಕ್ರಮ ತೀವ್ರ ಚರ್ಚೆಗೆ ಗ್ರಾಸವಾಗಿದೆ.