ಆಂಧ್ರಪ್ರದೇಶ: ಆಂಧ್ರಪ್ರದೇಶ ಸಿಎಂ ಖಾತೆಗೆ ನಕಲಿ ಚೆಕ್ ಮೂಲಕ 52 ಕೋಟಿ ರೂ. ಲಪಟಾಯಿಸಲು ಯತ್ನಿಸಿದ್ದ ಮಂಗಳೂರಿನ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕರಾವಳಿ ಮೂಲದ ನಿರ್ದೇಶಕ ಉದಯ್ ಕುಮಾರ್, ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ನಿರ್ದೇಶಕ ಉದಯ ಶೆಟ್ಟಿ ಕಾಂತಾವರ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಬಂಧಿತ ಆರೋಪಿಗಳು. ನಕಲಿ ಚೆಕ್ ಬಳಕೆ ಮಾಡಿಕೊಂಡು 52 ಕೋಟಿ ರೂ. ವಿತ್ ಡ್ರಾ ಮಾಡಲು ಮುಂದಾಗಿತ್ತು.
ಆಂಧ್ರ ಸಿಎಂ ರಿಲೀಫ್ ಫಂಡ್ ನೀಡಿದ ಚೆಕ್ ಇದು ಎಂದು ಹೇಳಿ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಬ್ಯಾಂಕ್ನಲ್ಲಿ ಡ್ರಾ ಮಾಡಲು ಮುಂದಾಗಿತ್ತು.ದೊಡ್ಡ ಮೊತ್ತವಾದ್ದರಿಂದ ಬ್ಯಾಂಕ್ ಸಿಬ್ಬಂದಿಗೆ ಸಹಜವಾಗಿ ಅನುಮಾನ ಮೂಡಿದ್ದು, ತಕ್ಷಣ ಬ್ಯಾಂಕ್ ಮ್ಯಾನೇಜರ್ ಆಂಧ್ರ ಸರ್ಕಾರದ ಜತೆ ಮಾತನಾಡಿದ್ದರು.
ಈ ವೇಳೆ ಅಷ್ಟು ಮೊತ್ತದ ಚೆಕ್ ಕೊಟ್ಟಿಲ್ಲ ಎಂದು ಸಿಎಂ ಕಚೇರಿ ಸ್ಪಷ್ಟನೆ ನೀಡಿತು. ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಇವರನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈ ಸಂಬಂಧ ತನಿಖೆಗೆ ಆಗ್ರಹಿಸಿದೆ. ಇದುವರೆಗೆ 117 ಕೋಟಿ ರೂ ವಂಚನೆಯಾಗಿರುವುದು ಪತ್ತೆಯಾಗಿದೆ.