ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಪಡೆದು ದಾಸ್ತಾನಿರಿಸಿದ ಕೋಟದ ಶಿರಿಯಾರ ಗ್ರಾಮದ ದೇವ ರೈಸ್ ಇಂಡಸ್ಟ್ರೀಸ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಿಬಂದಿ ಮತ್ತು ತಹಶೀಲ್ದಾರರು ದಾಳಿ ನಡೆಸಿ 540 ಕೆ.ಜಿ. ಅಕ್ಕಿ ವಶ ಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಉಡುಪಿ ಆಹಾರ ಉಪನಿರೀಕ್ಷಕರಾದ ಜಯಮಾಧವ ಹಾಗೂ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಕೋಟ ಠಾಣೆ ಉಪನಿರೀಕ್ಷಕ ತೇಜಸ್ವಿ ಜತೆಯಾಗಿ ದಾಳಿ ನಡೆಸಿದರು. ದಾಳಿಯ ಸಂದರ್ಭ ಆಹಾರ ನಿರೀಕ್ಷಕರಾದ ಶಿವರಾಜ್, ಸುರೇಶ್, ಲೀಲಾನಂದ ಹಾಗೂ ಸಿಬಂದಿ ಜತೆಗಿದ್ದರು. ಇಂಡಸ್ಟ್ರೀಸ್ ಮಾಲಕನ ಮೇಲೆ ಪ್ರಕರಣ ದಾಖಲಾಗಿದೆ.
ಕೋಟ ಕಂದಾಯ ನಿರೀಕ್ಷಕರಾದ ಮಂಜುನಾಥ ಅವರು ಮೇಲಧಿಕಾರಿಯವರ ಸೂಚನೆಯಂತೆ ರೈಸ್ ಇಂಡಸ್ಟ್ರೀಸ್ಗೆ ದಾಳಿ ನಡೆಸಿ ಜಿಪಿಎಸ್ ಫೊಟೋ ತೆಗೆಯಲು ಮುಂದಾದಾಗ ಸ್ಥಳೀಯರಾದ ಪ್ರಭಾಕರ ಅವರು ಮೊಬೈಲ್ ಫೋನನ್ನು ಕಿತ್ತುಕೊಳ್ಳುವ ಮೂಲಕ ಇಲಾಖಾ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದಾಗ ಅಧಿಕಾರಿಗಳೇ ನನ್ನ ಮೇಲೆ ಹಲ್ಲೆ ನಡೆಸಿ, ಸುಳ್ಳು ದೂರು ದಾಖಲಿಸಿದ್ದಾರೆ. ರೈಸ್ಮಿಲ್ ನನ್ನ ಸಂಬಂಧಿಯದು. ಈ ಬಗ್ಗೆ ನಾನು ಕೂಡ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ಕಾನೂನು ಹೋರಾಟ ನಡೆಸುವೆ ಎಂದು ಪ್ರಭಾಕರ ನಾಯಕ್ ಅವರು ತಿಳಿಸಿದ್ದಾರೆ