ಸುಳ್ಯ: ಹಲವು ಗಂಭೀರ ಅಪರಾಧಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.ಕಡಬ ಪೊಲೀಸ್ ಠಾಣೆಯ ಅ.ಕ್ರ: 15/2012, ಕಲಂ 302, 201 IPC ಪ್ರಕರಣದಲ್ಲಿ ಕನ್ವಿಕ್ಷನ್ ವಾರಂಟ್ ಹೊಂದಿದ್ದ ಸುಳ್ಯ ಅಜ್ಜಾವರ ನಿವಾಸಿ ಎನ್.ಎಂ. ಅಜೀಜ್ಗೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು 10 ವರ್ಷಗಳ ಶಿಕ್ಷೆ ವಿಧಿಸಿತ್ತು.

ಆರೋಪಿ 2018ರಲ್ಲಿ ಕೇರಳ ಪೊಲೀಸರ ವಶದಲ್ಲಿದ್ದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದನು. ಬಳಿಕ ತನ್ನ ಹೆಸರನ್ನು ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿ ಬಸವರಾಜು ಎಂದು ಬದಲಿಸಿಕೊಂಡು ಆಂಧ್ರಪ್ರದೇಶದಲ್ಲಿ ಅಡಗಿ ವಾಸಿಸುತ್ತಿದ್ದನು.
ಈತನ ಪತ್ತೆಗಾಗಿ ಪೊಲೀಸರು ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಅಂತಿಮವಾಗಿ ಆಂಧ್ರಪ್ರದೇಶದ ಚಿತ್ತೂರು ಜೈಲಿನಲ್ಲಿ ಇರುವುದನ್ನು ದೃಢಪಡಿಸಿದರು. ನಂತರ ಸಂಬಂಧಪಟ್ಟ ನ್ಯಾಯಾಲಯದಿಂದ ಬಾಡಿ ವಾರಂಟ್ ಪಡೆದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.ಪರಿಶೀಲನೆ ವೇಳೆ ಆರೋಪಿ ಲಾಭಕ್ಕಾಗಿ ನಡೆಸಿದ 3 ಕೊಲೆ ಪ್ರಕರಣಗಳು ಹಾಗೂ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈತನ ಬಂಧನದಿಂದ ಕೇರಳದ 3 LPC ಪ್ರಕರಣಗಳು, ಸುಳ್ಯ ಠಾಣೆಯ 2 LPC ಪ್ರಕರಣಗಳು ಹಾಗೂ ಕಡಬ ಠಾಣೆಯ 1 ಕನ್ವಿಕ್ಷನ್ ವಾರಂಟ್ ಪ್ರಕರಣ ಪತ್ತೆಯಾಗಿವೆ.








