ಅಖಿಲ ಭಾರತ ಬೀಚ್ ಕುಸ್ತಿ ಸಮಿತಿಯ ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಯವರು ಆಯ್ಕೆಯಾಗಿದ್ದಾರೆ. ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು ಹಾಗೂ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳು ಆಗಿರುವ ಗುಣರಂಜನ್ ಶೆಟ್ಟಿಯವರು ಉತ್ತರ ಪ್ರದೇಶ ನೋಯ್ಡಾದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಖಿಲ ಭಾರತ ಬೀಚ್ ಕುಸ್ತಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದ.ಕ ಜಿಲ್ಲೆಯ ನಡುಮೊಗರುಗುತ್ತು ವಿಠಲ ಶೆಟ್ಟಿ ಮತ್ತು ಬೆಳ್ಳಿಪ್ಪಾಡಿ ಉರಮಾಲು ಗುತ್ತು ಪ್ರಪುಲ್ಲ ವಿ ಶೆಟ್ಟಿ ದಂಪತಿಗಳ ಪುತ್ರ ಹಾಗೂ ಡಾ. ಸಾಯಿ ರಮೇಶ್ ಶೆಟ್ಟಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿರವರ ಸಹೋದರ ಶೆಟ್ಟಿಯವರು ಮೂಲತಃ ಬೆಳ್ಳಿಪ್ಪಾಡಿ ಮನೆತನದವರು.
ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ನಂತರ ಸಂಘಕ್ಕೆ ಕಾಯಕಲ್ಪ ನೀಡಿದ್ದರು. ಕುಸ್ತಿಪಟುಗಳಿಗೆ ಅಗತ್ಯ ತರಭೇಟಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡುವ ಮೂಲಕ ಕುಸ್ತಿ ಪಂದ್ಯಾವಳಿಗಳಲ್ಲಿ ಕರ್ನಾಟಕದ ಕುಸ್ತಿಪಟುಗಳು ಜಯಶಾಲಿಯಾಗಲು ಕಾರಣೀಭೂತರಾಗಿದ್ದಾರೆ. ಇದೀಗ ಅಖಿಲ ಭಾರತ ಬೀಚ್ ಕುಸ್ತಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕನ್ನಡಿಗರಿಗೆ ಹೆಮ್ಮೆ ತಂದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗುಣರಂಜನ್ ಶೆಟ್ಟಿಯವರು ’ಅಖಿಲ ಭಾರತ ಬೀಚ್ ಕುಸ್ತಿ ಸಮಿತಿಯ ಅಧ್ಯಕ್ಷನಾಗಿ ನೇಮಕಗೊಂಡಿರುವುದು ನನಗೆ ಸಿಕ್ಕ ಗೌರವ. ಈ ಕ್ಷಣವು ಕೇವಲ ನನ್ನದಲ್ಲ, ಇದು ಎಲ್ಲರ ಸಾಧನೆ. ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳು ನೀವು ನನಗೆ ನೀಡಿದ ಬೆಂಬಲ,ಪ್ರೀತಿ ವಿಶ್ವಾಸ, ನಂಬಿಕೆಯಿಂದ ನಾನು ಇಂದು ಈ ಉನ್ನತ ಸ್ಥಾನಕ್ಕೆ ಆಯ್ಕೆಯಾಗಿದ್ದೇನೆ. ಇದಕ್ಕಾಗಿ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮ ಪ್ರೋತ್ಸಾಹವು ನನ್ನ ಪ್ರಯಾಣದ ಬೆನ್ನೆಲುಬಾಗಿದೆ, ಪ್ರತಿ ಹಂತದಲ್ಲೂ ನನ್ನನ್ನು ಪ್ರೋತ್ಸಾಹಿಸಿದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿ, ತಮ್ಮ ಸಂತಸದ ಕ್ಷಣವನ್ನು ಹಂಚಿಕೊಂಡರು.