ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿಯೊಬ್ಬರನ್ನು ಅರಣ್ಯ ಇಲಾಖೆ ಆರ್ ಆರ್ ಟಿ ಸಿಬ್ಬಂದಿಯೊಬ್ಬ ಅಡ್ಡಗಟ್ಟಿ ಹೊರಗೆಳೆದು ಹಲ್ಲೆ ನಡೆಸಿರುವ ಘಟನೆ ಸಕಲೇಶಪುರದ ಅಗ್ನಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆ ಮಾಡಿದ ಆರೋಪಿ ಅರಣ್ಯ ಇಲಾಖೆ ಸಿಬ್ಬಂದಿ ಮದನ್ ಎಂದು ಗುರುತಿಸಲಾಗಿದೆ.
ಮದನ್ ಗೆ ಈ ಹಿಂದೆ ಮದುವೆಯಾಗಿದ್ದು, ಕೌಟುಂಬಿಕ ಹಿನ್ನೆಲೆಯಲ್ಲಿ ಪತ್ನಿಯಿಂದ ದೂರವಾಗಿದ್ದ. ಇದಾದ ಬಳಿಕ ತನ್ನ ಊರಿನ ಮಹಿಳೆಯೊಬ್ಬರ ನಂಬರ್ ಪಡೆದು ಆಕೆಗೆ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಅ ಮಹಿಳೆ ಆರೋಪಿಗೆ ಮೆಸೇಜ್ ಮಾಡದಂತೆ ಎಚ್ಚರಿಕೆ ನೀಡಿ ನಂಬರ್ ಬ್ಲಾಕ್ ಮಾಡಿದ್ದರು. ಬಳಿಕ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ ಪುತ್ರಿಯ ನಂಬರ್ ಸಂಗ್ರಹಿಸಿ ಆಕೆಗೆ ಕರೆ ಮಾಡುವುದು, ಮೆಸೇಜ್ ಮಾಡುವುದು ಮಾಡಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣ ಯುವತಿ ಮನೆಗೆ ಬಂದಿದ್ದಳು. ಮನೆಗೆ ಬಸ್ನಲ್ಲಿ ಬರುವಾಗ ಮದನ್ ಪದೇ ಪದೇ ಫೋನ್, ಮೆಸೇಜ್ ಮಾಡುತ್ತಿದ್ದು, ಇದರಿಂದ ಬೇಸತ್ತ ಯುವತಿ, ಮದನ್ ಎಂಬ ವ್ಯಕ್ತಿ ಕಿರುಕುಳ ನೀಡುತ್ತಿದ್ದಾನೆ ಎಂದು ಪೋಷಕರಿಗೆ ತಿಳಿಸಿದ್ದಾಳೆ. ಈ ಮಹಿಳೆಯು ಬೆಂಗಳೂರಿಗೆ ತೆರಳಲು ಕಾರಿನಲ್ಲಿ ಸಕಲೇಶಪುರಕ್ಕೆ ಹೊರಟಿದ್ದ ವೇಳೆ ಮದನ್ ಕರೆ ಮಾಡಿದ್ದಾನೆ. ಇದರಿಂದ ಸಿಟ್ಟಾದ ಯುವತಿ ತನ್ನ ತಾಯಿಗೆ ಹೇಳಿದ್ದಾಳೆ. ಈ ವೇಳೆ ಯುವತಿಯ ತಾಯಿ ದೂರು ಕೊಡುವುದಾಗಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.ಇದರಿಂದ ಕೆರಳಿದ ಮದನ್ ಯುವತಿ ತೆರಳುತ್ತಿದ್ದ ಕಾರನ್ನು ತಡೆದು ಆಕೆಯ ಮೇಲೆ ಹಲ್ಲೆ ಮಾಡಿ ಬಟ್ಟೆ ಹರಿದು ಎಳೆದಾಡಿದ್ದಾನೆ ಎನ್ನಲಾಗಿದೆ. ಇದನ್ನು ಕಂಡ ಕಾರು ಚಾಲಕ ಯುವತಿಯ ರಕ್ಷಣೆಗೆ ಬಂದಿದ್ದು, ಮದನ್ ಸ್ಥಳದಿಂದ ಎಸ್ಕೇಪ್ ಆಗಿದ್ದ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.