ಬೆಂಗಳೂರು: ನಾಪತ್ತೆಯಾಗಿರುವ ಮಗನನ್ನು ಹುಡುಕಿಕೊಡುವಂತೆ ಕೋರಿ ಮಹಿಳೆಯೊಬ್ಬರು ನೀಡಿದ ದೂರನ್ನು ಸ್ವೀಕರಿಸದೇ ನಿರ್ಲಕ್ಷಿಸಿದ ಕಲಬುರ್ಗಿ ಜಿಲ್ಲೆಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗೆ ಹೈಕೋರ್ಟ್ ಒಂದು ವಾರ ರಸ್ತೆಯ ಕಸ ಗುಡಿಸುವ ಶಿಕ್ಷೆ ವಿಧಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಪಿ.ಕೃಷ್ಣಭಟ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಮಿಣಜಗಿ ತಾಂಡದ ಕೂಲಿ ಕಾರ್ಮಿಕ ಮಹಿಳೆ ತಾರಾಬಾಯಿ ತನ್ನ ಮಗ ಸುರೇಶ್ 2020 ಅಕ್ಟೋಬರ್ 20 ರಿಂದ ನಾಪತ್ತೆಯಾಗಿದ್ದಾನೆ ಎಂದು ಸ್ಪೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಆದರೆ ಪೊಲೀಸರು ದೂರನ್ನು ಸ್ವೀಕರಿಸಿರಲಿಲ್ಲ. ಹಾಗೆಯೇ ನಾಪತ್ತೆಯಾಗಿರುವ ತಾರಾಬಾಯಿಯ ಮಗನನ್ನು ಹುಡುಕು ಪ್ರಯತ್ನ ಮಾಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ತಾರಾಬಾಯಿ ತನ್ನ ಮಗನನ್ನು ಹುಡುಕಿಸಿ ಕೊಡುವಂತೆ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ನಾಪತ್ತೆಯಾಗಿರುವ ಸುರೇಶ್ ನನ್ನು ಹುಡುಕಿಕೊಡುವಂತೆ ನಿರ್ದೇಶಿಸಿದೆ ಜೊತೆಗೆ ಕರ್ತವ್ಯಲೋಪ ಎಸಗಿರುವ ಇನ್ಸ್ ಪೆಕ್ಟರ್ ಗೆ ಒಂದು ವಾರಗಳ ಕಾಲ ಪೊಲೀಸ್ ಠಾಣೆ ಮುಂಭಾಗದ ರಸ್ತೆಯ ಕಸ ಗುಡಿಸಿ ಸ್ವಚ್ಛಗೊಳಿಸಬೇಕು ಎಂದು ತೀರ್ಪು ನೀಡಿದೆ.