ಬೆಂಗಳೂರು: ಪ್ರೀತಿಸಲು ಒಪ್ಪದ ಪ್ರಿಯತಮೆಯ ಕತ್ತು, ಹೊಟ್ಟೆ, ಬೆನ್ನಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿರುವ ಪ್ರೇಮಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್ನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರೀತಿಸಲು ಒಪ್ಪಲಿಲ್ಲ ಎಂದು ಯುವತಿಗೆ ಚಾಕುವಿನಿಂದ ಇರಿದು ದೀಪಕ್ ಹಲ್ಲೆ ಮಾಡಿದ್ದಾನೆ. ಈ ಕುರಿತಾಗಿ ಯುವತಿಯ ಕುಟುಂಬಸ್ಥರು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದರು. ಇದೀಗ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.
ದೀಪಕ್ನನ್ನು ಪ್ರಿತಿಸಲು ಯುವತಿ ತಿರಸ್ಕರಿಸಿದ್ದಳು. ಆದರೆ ದೀಪಕ್ ಯುವತಿಯ ಹಿಂದೆ ಬಿದ್ದಿದ್ದು ಮದುವೆ ಆಗೋಣ ಎಂದು ಪೀಡಿಸುತ್ತಿದ್ದನು. ಈ ವಿಚಾರವಾಗಿ ಮನನೊಂದ ಯುವತಿ ಪೋಷಕರಿಗೆ ತಿಳಿಸಿದ್ದಳು. ಈ ವಿಚಾರವಾಗಿ ದೀಪಕ್ನನ್ನು ಕರೆಸಿ ಬುದ್ದಿವಾದ ಹೇಳಿ ಕಳುಹಿಸಲಾಗಿತ್ತು. ಆದರೆ ದೀಪಕ್ ಮಾತ್ರ ಅವನ ನಿರ್ಧಾರವನ್ನು ಬದಲಿಸಿರಲಿಲ್ಲ.
ಯುವತಿಗೆ ಫೋನ್ ಕರೆ ಮಾಡಿ ತೊಂದರೆ ನೀಡುತ್ತಿದ್ದನು. ಇದರಿಂದಾಗಿ ಯುವತಿಯ ನಂಬರ್ ನ್ನು ಬದಲಾಯಿಸಿಕೊಂಡಿದ್ದಳು. ದೀಪಕ್ ವಿಚಾರವಾಗಿ ಮನನೊಂದ ಯುವತಿಯ ಹೆತ್ತವರು ಬಾಡಿಗೆ ಮನೆಯನ್ನು ಬದಲಾಯಿಸಿಕೊಂಡು ಬೇರೆ ಕಡೆಗೆ ಹೋಗುವ ವೇಳೆ ಯುವತಿಯನ್ನು ಕಂಡ ದೀಪಕ್ ಆಕೆಯ ಕತ್ತು, ಹೊಟ್ಟೆ, ಬೆನ್ನಗೆ ಚಾಕು ಇರಿದು ಪರಾರಿಯಾಗಿದ್ದಾನೆ.
ಸ್ಥಳದಲ್ಲಿದ್ದವರು ಯುವತಿಯ ನರಳಾಟವನ್ನು ನೋಡಲಾಗದೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಚಾರವಾಗಿ ಯುವತಿ ಹೆತ್ತವರು ಪೊಲೀಸ್ ಠಾಣೆಯಲ್ಲಿ ದೀಪಕ್ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ನಂದಿನಿ ಲೇಔಟ್ ಪೊಲೀಸರು ಪಾಗಲ್ ಪ್ರೇಮಿಯನ್ನು ಬಂಧಿಸಿದ್ದಾರೆ.