ಬಂಟ್ವಾಳ: ಇಬ್ಬರು ಪುಟ್ಟ ಹೆಣ್ಣು ಮಕ್ಕಳು. ಒಬ್ಬಳು 2 ವರ್ಷದ ಅಂಶಿಕ, ಇನ್ನೊಬ್ಬಳು 3 ತಿಂಗಳ ಪೂರ್ವಿಕ. ಈ ಮಕ್ಕಳಿಬ್ಬರ ತಾಯಿ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ತಾಯಿಯಿಲ್ಲದೆ ತಬ್ಬಲಿಯಾಗಿ ಸದ್ಯ ದೊಡ್ಡಮ್ಮನ ಮಡಿಲಲ್ಲಿ ಬೆಳೆಯುತ್ತಿರುವ ಈ ಪುಟ್ಟ ಕಂದಮ್ಮಗಳ ಮುಂದಿನ ಭವಿಷ್ಯಕ್ಕಾಗಿ ಈಗ ಆಸರೆಯಾಗಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಪರಿಕಲ್ಪನೆಯಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ಸ್ಥಾಪಿಸಲಾದ’ಬಂಟ್ವಾಳ ಬಿಜೆಪಿ ಕ್ಷೇಮ ನಿಧಿ.
ವೇಣೂರು ಸಮೀಪದ ಪೆರಿಂಜೆಯ ಅನಸೂಯ (ಅನುಷಾ) ಅವರು ಪೂರ್ವಿಕಳಿಗೆ ಜನ್ಮ ನೀಡಿ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ತಾಯಿಯಿಲ್ಲದ ಇಬ್ಬರು ಪುಟ್ಟ ಕಂದಮ್ಮಗಳಿಗೆ ಈಗ ಆಸರೆಯೆಂದರೆ ಅನಸೂಯ ಅವರ ಅಕ್ಕ. ಅನಸೂಯ ಅವರ ಅಕ್ಕ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನಡುಲಚ್ಚಿಲ್ ನಿವಾಸಿ ರೇವತಿ ಕೃಷ್ಣಪ್ಪ. ಅವರು ತನ್ನ ಮೂವರು ಮಕ್ಕಳ ಜೊತೆಯಲ್ಲಿ ಸದ್ಯ ಆರೈಕೆ ಮಾಡುತ್ತಿದ್ದಾರೆ. ರೇವತಿ ಕೃಷ್ಣಪ್ಪ ಅವರ ಕುಟುಂಬ ಬಡತನದ ನಡುವೆಯು ತನ್ನ ಮೃತ ಸಹೋದರಿಯ ಪುಟ್ಟ ಮಕ್ಕಳನ್ನು ಸಲಹುವ ಹೊಣೆಗಾರಿಕೆಯನ್ನು ಹೊತ್ತು ಮಾನವೀಯತೆ ಮೆರೆದಿದ್ದಾರೆ. ಇವರ ಈ ಮಾನವೀಯ ಕಾರ್ಯಕ್ಕೆ ಬಂಟ್ವಾಳ ಬಿಜೆಪಿ ಕ್ಷೇಮ ನಿಧಿಯ ಮೂಲಕ ನೆರವು ನೀಡಿದ್ದು ಈ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಜವಾಬ್ದಾರಿಯನ್ನು ಬಂಟ್ವಾಳ ಬಿಜೆಪಿ ಹೊತ್ತಿದೆ.
ಮಕ್ಕಳ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ತಲಾ ಎರಡು ಸಾವಿರ ರೂ.ಗಳಂತೆ ನೀಡುವುದರ ಜತೆಗೆ ಇಬ್ಬರು ಮಕ್ಕಳ ಹೆಸರಿನಲ್ಲಿ ತಲಾ 25 ಸಾವಿರ ರೂ.ವಿನಂತೆ ಮಣಿನಾಲ್ಕೂರು ವ್ಯ.ಸೇ.ಸ.ಬ್ಯಾಂಕ್ ನಲ್ಲಿ ಶನಿವಾರವೇ ಠೇವಣಿ ಇರಿಸಲಾಯಿತು. ಈ ಹಣ ಮಕ್ಕಳಿಗೆ 16 ವರ್ಷ ತುಂಬುವ ವೇಳೆ ಒಂದು ಲಕ್ಷ ರೂ.ದೊರೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಏಳನೇ ವರ್ಷದ ಆಡಳಿತದ ಸಂಭ್ರಮ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಜನಸೇವಾ ಕಾರ್ಯದ ಮೂಲಕ ಆಚರಿಸಿರುವ ಬಿಜೆಪಿ ಬಂಟ್ವಾಳ ಬಿಜೆಪಿ ಕ್ಷೇಮ ನಿಧಿ ಯೋಜನೆಗೆ ಮೊದಲ ಆರ್ಹ ಫಲಾನುಭವಿಗೆ ಮಣಿನಾಲ್ಕೂರು ಗ್ರಾಮದ ನಡುಲಚ್ಚಿಲ್ ನ ಮನೆಯಲ್ಲಿಯೇ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಅಂಶಿಕಾ ಮತ್ತು ಪೂರ್ವಿಕ ಹೆಸರಿನಲ್ಲಿ ತಲಾ 25 ಸಾವಿರ ರೂ.ನಂತೆ 50 ಸಾವಿರ ರೂ.ನ್ನು ಬ್ಯಾಂಕ್ ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸುಧಾಕರ ಶೆಟ್ಟಿ ಅವರಿಗೆ ಹಸ್ತಾಂತರಿಸಿ ಅಧಿಕೃತ ಚಾಲನೆ ನೀಡಲಾಯಿತು.