
ಬಂಟ್ವಾಳ: ತಾಲೂಕಿನ ಮಾಣಿ ಸಮೀಪದ ಕೊಡಾಜೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಕ್ಷತ್ರ ಸಭಾಭವನವನ್ನು ಜ.22ರಂದು ಲೋಕಾರ್ಪಣೆಗೊಳಿಸಲಾಯಿತು.

ಮಾಣಿ ಶ್ರೀ ಉಳ್ಳಾಳಿ ದೈವಸ್ಥಾನದ ಆಡಳಿತ ಮೊಕ್ತಸರ ಸಚಿನ್ ರೈ ಮಾಣಿಗುತ್ತು ಅವರು ದೀಪ ಬೆಳಗಿಸುವುದರ ಮೂಲಕ ಸಭಾಭವನ ಉದ್ಘಾಟಿಸಿದರು.


ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಮಾಣಿ ಮೈಸೂರು ರಸ್ತೆ ಮತ್ತು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂದಿಸುವ ಮಾಣಿ ಗ್ರಾಮವು ಭವಿಷ್ಯದಲ್ಲಿ ಪ್ರಮುಖ ಕೇಂದ್ರವಾಗಲಿದೆ. ಇಂತಹ ಮಾಣಿ ಕೊಡಾಜೆ ಭಾಗದಲ್ಲಿ ನಿರ್ಮಿಸಿರುವ ನಕ್ಷತ್ರ ಸಭಾಭವನವು ಜನರಿಗೆ ಅನುಕೂಲವಾಗಲಿದೆ. ದಿಲೀಪ್ ಶೆಟ್ಟಿ ಅವರ ಉದ್ಯಮದ ಯಶಸ್ಸಿನ ಹಿಂದೆ ಅವರ ಪತ್ನಿ ಸುಲೋಚನ ಅವರ ಪಾತ್ರವಿದೆ ಎಂದರು.
ಮಾಜಿ ಶಾಸಕ ರುಕ್ಷ್ಮಯ ಪೂಜಾರಿ ಮಾತನಾಡಿ, ಸಾಮಾನ್ಯ ಜನರು ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ನಡೆಸಲು ನಕ್ಷತ್ರ ಸಭಾಭವನ ಸೂಕ್ತವಾಗಿದೆ. ಸಭಾಭವನದ ಮಾಲೀಕ ದಿಲೀಪ್ ಶೆಟ್ಟಿ ಅವರು ಕಷ್ಟದ ಜೀವನವನ್ನು ಎದುರಿಸಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಜನಸಾಮಾನ್ಯರು ಈ ಸಭಾಭವನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿ ಶುಭಹಾರೈಸಿದರು.
ಮಾಜಿ ಶಾಸಕಿ ಶಕುಂತಲ ಶೆಟ್ಟಿ ಮಾತನಾಡಿ, ಸೀಮಂತ ಶಾಸ್ತ್ರ, ಜನುಮದಿನ ಆಚರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಈ ಸಭಾಭವನದಲ್ಲಿ ಆಚರಿಸಬಹುದಾಗಿದೆ. ಈ ನಕ್ಷತ್ರ ಧ್ರುವ ನಕ್ಷತ್ರವಾಗಿ ಪ್ರಸಿದ್ಧಿ ಪಡೆಯುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮೊಹಮ್ಮದ್ ಮಾತನಾಡಿ, ನಕ್ಷತ್ರ ಸಭಾಭವನವು ಸಮಾಜಕ್ಕೆ ವಿಶೇಷ ಕೊಡುಗೆಯಾಗಿದೆ. ಸಮಾಜವು ವೇಗವಾಗಿ ಬೆಳೆಯುತ್ತಿದೆ. ಆದರೆ ಸಭಾಂಗಣದ ಕೊರತೆ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಕ್ಷತ್ರ ಸಭಾಭವನ ಜನರಿಗೆ ಅನುಕೂಲವಾಗಲಿದೆ. ಸಣ್ಣ ವ್ಯವಹಾರಗಳನ್ನು ನಡೆಸುತ್ತಾ ಜೀವನದಲ್ಲಿ ಮುಂದೆ ಬಂದ ದಿಲೀಪ್ ಅವರು ಆರ್ಥಿಕವಾಗಿ ಸಬಲರಾದಾಗ ಸಮಾಜಕ್ಕೆ ಉಪಯೋಗುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದು ಹೇಳಿ ದಿಲೀಪ್ ಅವರಿಗೆ ಶುಭಹಾರೈಸಿದರು.
ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ, ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು ಉಡುಪಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕ ಪಕ್ಕಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್, ತುಂಬೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು, ಪೆರಾಜೆಯ ಗುಡ್ಡೆಚಾಮುಂಡಿ ದೈವಸ್ಥಾನದ ಅನುವಂಶಿಯ ಆಡಳಿತ ಮೊಕ್ತಸರ ಶ್ರೀಕಾಂತ್ ಆಳ್ವ ಪೆರಾಜೆಗುತ್ತು, ಕೊಡಾಜೆ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ರಫೀಕ್ ಹಾಜಿ ಸುಲ್ತಾನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಅರೆಬೆಟ್ಟುಗುತ್ತು, ಪುತ್ತೂರು ನಗರ ಯೋಜನಾ ಪ್ರಾಧೀಕಾರದ ಸದಸ್ಯ ಅನ್ವರ್ ಖಾಸಿಂ, ಬಂಟ್ವಾಳ ಮುಡೂರು-ಪಡೂರು ಜೋಡೆಕರೆ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿಲೀಪ್ ಶೆಟ್ಟಿ ಸ್ವಾಗತಿಸಿ, ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿ ವಂದಿಸಿದರು. ಸೇವಂತಿಕಾ ಪ್ರಕಾಶ್ ರೈ ಪ್ರಾರ್ಥಿಸಿದರು.
ತಂರ್ಜಿಗುತ್ತು ಸುಜಾತ ದಿನೇಶ್ ಶೆಟ್ಟಿ ನೆಲ್ಯಾಡಿ, ತಂರ್ಜಿಗುತ್ತು ಸುದೀಪ್ ಕುಮಾರ್ ಶೆಟ್ಟಿ, ತಂರ್ಜಿಗುತ್ತು ಪ್ರದೀಪ್ ಶೆಟ್ಟಿ, ಸಂಜೀವ ರೈ ಸಾಲ್ಮರ ಮುದ್ದುಡಿ ಸೇರಿದಂತೆ ಹಲವಾರು ಗಣ್ಯರು ಹಾಗೂ ಕುಟುಂಬಸ್ಥರು ಬಂಧು ಮಿತ್ರರು ಉಪಸ್ಥಿತರಿದ್ದರು.ಸಭಾಂಗಣದ ಮಾಲಕರಾದ ತಂರ್ಜಿಗುತ್ತು ದಿಲೀಪ್ ಶೆಟ್ಟಿ, ಕಾಡೂರುಗುತ್ತು ಸುಲೋಚನಾ ಡಿ. ಶೆಟ್ಟಿ, ಮಾ. ಧಸ್ಮಿತ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.
ಯಕ್ಷ ‘ಗಾನ’ ವೈಭವ
ಸಭಾಭವನದ ಉದ್ಘಾಟನೆ ಪ್ರಯುಕ್ತ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಯಕ್ಷ ‘ಗಾನ’ ವೈಭವ ನಡೆಯಿತು. ಧೀರಜ್ ರೈ ಸಂಪಾಜೆ, ಭರತ್ ರಾಜ್ ಶೆಟ್ಟಿ ಸಿದ್ದಕಟ್ಟೆ, ಶ್ರೇಯ ಆಚಾರ್ಯ ಪುತ್ತೂರು ಭಾಗವತಿಕೆ ಮಾಡಿದರು. ರೋಹಿತ್ ಉಚ್ಚಿಲ ಅವರು ಚೆಂಡೆ, ಶ್ರೀಧರ್ ವಿಟ್ಲ ಅವರು ಮದ್ದಳೆ ಹಾಗೂ ನಿಶ್ವತ್ ಜೋಗಿ ಅವರು ಚಕ್ರತಾಳ ಬಾರಿಸಿದರು.








