ಬಂಟ್ವಾಳ: ಸರಕಾರಿ ಸ್ಥಳ ಅತಿಕ್ರಮಣ ಮಾಡಿ ನಿರ್ಮಿಸಿದ ಕಟ್ಟಡವನ್ನು ಅಧಿಕಾರಿಗಳು ತೆರವುಗೊಳಿಸಿದ ಘಟನೆ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೋಳಿಗುಡ್ಡೆ ಎಂಬಲ್ಲಿ ನಡೆದಿದೆ.
ಪೆರಾಜೆ ಗ್ರಾಮದ ಮಿತ್ತಪೆರಾಜೆ ಕಲ್ಲೋಳಿಗುಡ್ಡೆ ಎಂಬಲ್ಲಿನ ಸರಕಾರಿ ಸ್ಥಳವನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಗ್ರಾಮ ಪಂಚಾಯತ್ ಗಮನಕ್ಕೆ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದು ಪೆರಾಜೆ ಗ್ರಾ.ಪಂ.ಪಿ.ಡಿ.ಒ ಶಂಭು ಕುಮಾರ್ ಶರ್ಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವ ವ್ಯಕ್ತಿ ಗಳು ಕೂಡಲೇ ನಿರ್ಮಾಣ ಕಾರ್ಯವನ್ನು ನಿಲ್ಲಿಸಿತಕ್ಕದ್ದು , ತಪ್ಪಿದ್ದಲ್ಲಿ ಪಂಚಾಯತ್ ರಾಜ್ ನಿಯಮ ದಂತೆ ಕ್ರಮಕೈಗೊಳ್ಳುವ ಬಗ್ಗೆ ಹಾಗೂ ಸಂಭವಿಸುವ ನಷ್ಟಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ನೋಟೀಸ್ ಅನ್ನು ಅಕ್ರಮ ನಿರ್ಮಾಣ ವಾಗುತ್ತಿರುವ ಕಟ್ಟಡಕ್ಕೆ ಅಂಟಿಸಲಾಗಿತ್ತು.
ಆದರೆ ನೋಟೀಸ್ ಗೆ ಬೆಲೆ ನೀಡದೆ ಮತ್ತೆ ರಾತ್ರಿ ವೇಳೆ ಕದ್ದು ಕಟ್ಟಡ ಕಾಮಗಾರಿ ನಡೆಸಿದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಿನ್ನೆ ಪೆರಾಜೆ ಗ್ರಾಮ ಪಂಚಾಯತ್ ಪಿಡಿ.ಒ ಶಂಭು ಕುಮಾರ್ ಶರ್ಮ, ಮಾಣಿ ಗ್ರಾಮಕರಣೀಕೆ ಸುರಕ್ಷ ಹಾಗೂ ಪಂಚಾಯತ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಿದ್ದಾರೆ.