ವಿಟ್ಲ: ಉಕ್ಕುಡ -ಕನ್ಯಾನ ರಸ್ತೆಯಲ್ಲಿ ಮಣ್ಣು ಸಾಗಿಸುತ್ತಿದ್ದ ಲಾರಿಯೊಂದು ಇಕೋ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಕನ್ಯಾನ ಕಡೆಯಿಂದ ಬರುತ್ತಿದ್ದ ಬಾಕ್ಸೈಟ್ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿ ಕೇಪಳಗುಡ್ಡೆ ತಿರುವಿನಲ್ಲಿ ದೇಲಂತಬೆಟ್ಟು ಕಡೆಯಿಂದ ಬರುತ್ತಿದ್ದ ಇಕೋ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ಇಕೋ ವಾಹನದ ಬಲ ಭಾಗ ಸಂಪೂರ್ಣ ಜಖಂಗೊಂಡಿದೆ.
ದೇಲಂತಬೆಟ್ಟು ನಿವಾಸಿ ಅವಿಲ್ ಡಿಸೋಜ ಅವರಿಗೆ ಸೇರಿದ ಇಕೋ ವಾಹನವಾಗಿದ್ದು, ಕನ್ಯಾನ ಮೂಲಕ ಮಂಗಳೂರು ಕಛೇರಿಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ. ಸ್ಥಳಕ್ಕೆ 112 ತುರ್ತು ವಾಹನ ಬಂದಿದ್ದು, ವಾಹನಗಳನ್ನು ವಿಟ್ಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ದಿನದ 24ಗಂಟೆಯೂ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಬಾಕ್ಸೈಟ್ ಸಾಗಾಟದ ಯಮದೂತ ಲಾರಿಗಳು ಕನ್ಯಾನ-ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಯಾವ ಕ್ಷಣ ಯಾರ ಪ್ರಾಣ ಬಲಿ ಪಡೆಯುತ್ತೋ ಎಂಬ ಆತಂಕ ವ್ಯಕ್ತವಾಗಿದೆ.
ನಾಗರಿಕರು ವಿಟ್ಲ ಠಾಣೆಗೆ ಪಶ್ಚಿಮ ವಲಯ ಐಜಿಪಿ ಆಗಮಿಸಿದ್ದ ಸಂದರ್ಭದಲ್ಲಿ ಮಣ್ಣು ಸಾಗಾಟ ಲಾರಿಗಳಿಂದ ನಿತ್ಯ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದು, ಈ ವೇಳೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಅವರು ನೀಡಿದ್ದರು. ಬಳಿಕದ ದಿನಗಳಲ್ಲೂ ಮಣ್ಣಿನ ಲಾರಿಗಳ ಅಬ್ಬರ ಮಾತ್ರ ನಿಂತಿಲ್ಲ.