ಬೆಂಗಳೂರು(ನ.15): ನಕಲಿ ಆಸ್ತಿಗಳಿಗೆ ಬ್ರೇಕ್ ಹಾಕುವ ಸಲುವಾಗಿ ಬಿಬಿಎಂಪಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ಖುದ್ದು ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಆಯುಕ್ತ ಜಂಟಿ ಸುದ್ದಿಗೋಷ್ಟಿ ಕರೆದು ಮಾಹಿತಿ ನೀಡಿದ್ದಾರೆ.
ಬೆಂಗಳೂರಲ್ಲಿ ಆಸ್ತಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇನ್ಮುಂದೆ ಬಿಬಿಎಂಪಿಯಲ್ಲಿ ಪೂರ್ವ, ಪಶ್ಚಿಮ, ದಕ್ಷಿಣ ವಲಯದ ಖಾತೆ ವರ್ಗಾವಣೆಯಲ್ಲಿ ಬದಲಾವಣೆ ಉಂಟಾಗಲಿದೆ. ಖಾತೆ ನೋಂದಣಿಯಲ್ಲೂ ಬದಲಾವಣೆ ತರಲಾಗ್ತಿದೆ. ಅಷ್ಟು ಮಾತ್ರವಲ್ಲದೆ ರಿಜಿಸ್ಟ್ರೇಷನ್ ಆದ ಬಳಿಕವೂ ಕೆಲ ಬದಲಾವಣೆ ಮಾಡಲಾಗ್ತಿದೆ ಎಂದರು.
ಈ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದು.. 2018ರ ಸಕಾಲದ ಯೋಜನೆಯ ಅಡಿಯಲ್ಲಿ ಆನ್ ಲೈನ್ ಖಾತ ಬದಲಾವಣೆ ತರಲಾಗ್ತಿದೆ. ಈ ಖಾತೆಯಲ್ಲಿ ಇವರೆಗೂ ಒಟ್ಟು 2.83 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ರಿಜಿಸ್ಟ್ರೇಷನ್ ಮಾಡಲಾಗಿದೆ. ಇಲ್ಲಿಯ ತನಕ ಖಾತ ಸರ್ಟಿಫಿಕೇಟ್ಗೆ ಮ್ಯಾನ್ಯುವಲ್ ಸಹಿ ಮಾಡಲಾಗ್ತಿತ್ತು. ಯಾವ ಮಾಲೀಕರ ಹೆಸರೂ ಕೂಡ ಹಾಕುತ್ತಿರಲಿಲ್ಲ, ಆದರೆ ಇನ್ನು ಮುಂದೆ ಅದು ಹಾಗಿರುವುದಿಲ್ಲ ಎಂದರು.
ಮೊದಲು 18 ವಿಷಯಗಳಿಗೆ ಸಂಬಂಧಿಸಿದಂತೆ ಇದ್ದ ಮಾಹಿತಿಯನ್ನು ಈಗ 46 ವಿಷಯಗಳಿಗೆ ಹೆಚ್ಚಿಸಲಾಗಿದೆ. ಇಷ್ಟು ಇದ್ದ ಸಹಿ ಪದ್ದತಿ ತೆಗೆದು ಇದೀಗ ಡಿಜಿಟಲ್ ಸಹಿ ಅಳವಡಿಸಲಾಗಿದೆ. ಯಾವ ಅಧಿಕಾರಿ ಸಹಿ ಹಾಕ್ತಾರೋ ಅದು ಆಧಾರ್ ಕಾರ್ಡಿಗೆ ಲಿಂಕ್ ಆಗಲಿದೆ. ಇದನ್ನ ಡಿಜಿ ಲಾಕರ್ಗೆ ಅಳವಡಿಸಲಾಗುತ್ತದೆ. ಮೊದಲು ಸಾರ್ವಜನಿಕರೇ ಅರ್ಜಿ ತುಂಬಬೇಕು, ಅದಾದ ಮೂರು ದಿನದೊಳಗೆ ಅಧಿಕಾರಿಗಳು ಸಹಿ ಮಾಡಲಿದ್ದಾರೆ. ಇ- ಆಸ್ತಿ ಪೋರ್ಟಲ್ನಿಂದ ಆಸ್ತಿ ರಿಜಿಸ್ಟ್ರೇಷನ್ಗೆ ಹೋದ್ರೆ, ಕಾವೇರಿ ಸಾಫ್ಟ್ ವೇರ್ ಮೂಲಕವೂ ಅದನ್ನು ಬದಲಾಯಿಸಿಕೊಳ್ಳಬಹುದು. ಆಸ್ತಿ ಟ್ರಾನ್ಸ್ಫರ್ ಮಾಡಿಸಿಕೊಳ್ಳಲು ಯಾವುದೇ ಸರ್ಟಿಫಿಕೇಟ್ ಬೇಕಿರುವುದಿಲ್ಲ ಎಂದಿದ್ದಾರೆ.
ಸದ್ಯ ನೂರು ವಾರ್ಡ್ಗಳಲ್ಲಿ ಈ ಸೌಲಭ್ಯ ಲಭ್ಯವಿದ್ದು, ಪೈಲಟ್ ಪ್ರಾಜೆಕ್ಟ್ ಆಗಿ ಮೂರು ವಾರ್ಡ್ಗಳಲ್ಲಿ ಆರಂಭಿಸಲಾಗಿದೆ. ಎರಡು ವಾರದ ಬಳಿಕ 97 ವಾರ್ಡ್ಗಳಲ್ಲಿಯೂ ಜಾರಿಗೆ ತರಲಾಗುತ್ತದೆ. ಇದರಿಂದಾಗಿ ಫೇಕ್ ಡಾಕ್ಯುಮೆಂಟ್ ಸ್ಥಗಿತಗೊಳ್ಳಲಿದೆ, ಜನರು ಬಿಬಿಎಂಪಿ ಕಚೇರಿಗೆ ಅಲೆಯೋದು ತಪ್ಪಲಿದೆ ಎಂದಿದ್ದಾರೆ.
ಈ ಕುರಿತು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಮಾತನಾಡಿದ್ದು, ಖಾತ ರಿಜಿಸ್ಟರ್ ನಮ್ಮ ಬಳಿ ಇರಲಿದೆ. ರಿಜಿಸ್ಟರ್ ಆಗ್ತಿದ್ದಂತೆ ಖಾತ ಎಕ್ಸ್ಟ್ರಾಕ್ಟ್ಗೆ ಸೇರಿಸಲಿದ್ದೇವೆ. ಇದನ್ನು ಹಳೆಯ ನೂರು ಬಿಎಂಪಿ ವಾರ್ಡ್ಸ್ಗಳಿಗೆ ವಿಸ್ತರಿಸಲಾಗುವುದು, ಇದೊಂದು ಉತ್ತಮ ಕೆಲಸವಾಗಿದೆ. ಸಾರ್ವಜನಿಕರು ಇದನ್ನ ಬಳಕೆ ಮಾಡಿಕೊಳ್ಳಬೇಕು, ಇನ್ನಷ್ಟು ಎಲ್ಲಾ ಮಾಹಿತಿಗಳು ಆನ್ ಲೈನ್ ಮೂಲಕ ಸಿಗುವಂತೆ ಮಾಡಲಾಗುವುದು ಎಂದಿದ್ದಾರೆ.