ಬೆಳ್ಳಾರೆ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಫೀಕ್ ಎಂಬಾತನ ಸಹೋದರ ಅಬ್ದುಲ್ ಸಪ್ರಿತ್ ಯಾನೆ ಅಬ್ದುಲ್ ಸಫ್ರಿಜ್ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ನ್ಯಾಯಾಲಯದ ಅನುಮತಿಯಂತೆ ಕೇಸು ದಾಖಲಿಸಿಕೊಂಡಿದ್ದು ಈಗಾಗಲೇ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ಳಾರೆ ನಿವಾಸಿ, ಇಬ್ರಾಹಿಂ ಎಂಬವರ ಪುತ್ರ ಸಫ್ರಿದ್ ಎಂದು ಗುರುತಿಸಲಾಗಿದೆ. ಹಿಂದೂ ಸಂಘಟನೆಯೊಂದರ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮು ರೈ ಕಾಂಪ್ಲೆಕ್ಸ್ನ ಮ್ಯಾನೇಜರ್ ಪ್ರಶಾಂತ್ ರೈ ಅವರಿಗೆ ಕೊಲೆ ಆರೋಪಿ ಶಫೀಕ್ ತಮ್ಮ ಸಫ್ರಿದ್ ಎಂಬಾತ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರು ದಾಖಲಾಗಿದೆ.
ಈಗಾಗಲೇ ನೀಡಿದ ದೂರನ್ನು ಠಾಣಾ ಎನ್ ಸಿ ಆರ್ ನಂಬರ್ 88/2022 ರಂತೆ ನೊಂದಾಯಿಸಿಕೊಂಡು ಇದೊಂದು ಅಸಂಜ್ಞೆಯ ಅಪರಾಧವಾಗಿರುವುದರಿಂದ ಮಾನ್ಯ ನ್ಯಾಯಾಲಯಕ್ಕೆ ಕಲಂ : 504, 506 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳುವ ಅನುಮತಿ ನೀಡುವಂತೆ ಕೋರಿಕೆ ಪತ್ರ ಸಲ್ಲಿಸಲಾಗಿದ್ದು, ಅದರಂತೆ ಮಾನ್ಯ ನ್ಯಾಯಾಲಯದ ಅನುಮತಿಯಂತೆ ಆರೋಪಿ ಅಬ್ದುಲ್ ಸಪ್ರೀತ್ ಯಾನೆ ಅಬ್ದುಲ್ ಸಫ್ರಿಜ್ ಎಂಬಾತನ ವಿರುದ್ಧ ಕಲಂ : 504, 506 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.