ಬೆಳ್ತಂಗಡಿ: ಇಲ್ಲಿಯ ಎಳನೀರು ಬಂಗಾರಬಳಿಗೆ ಎಂಬಲ್ಲಿ ಜಲಪಾತದಲ್ಲಿ ನಾಲ್ಕು ಮಂದಿ ಯುವಕರು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ನದಿ ಬದಿಯ ಗುಡ್ಡ ಕುಸಿದು ಬಿದ್ದ ಘಟನೆ ಜ.25 ರಂದು ಸಂಜೆ ನಡೆದಿದೆ. ಗುಡ್ಡ ಕುಸಿದು ಬಿದ್ದ ಸಂದರ್ಭದಲ್ಲಿ ಸ್ಥಾನ ಮಾಡುತ್ತಿದ್ದ ನಾಲ್ವರು ಯುವಕರಲ್ಲಿ ಉಜಿರೆಯ ಓರ್ವ ಯುವಕ ನಾಪತ್ತೆಯಾಗಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಜಿರೆ ಪರಿಸರದ ನಾಲ್ಕು ಮಂದಿ ಯುವಕರು ಒಟ್ಟು ಸೇರಿ ಬಂಗಾರಬಳಿಗೆ ಸಮೀಪದ ಜಲಪಾತ ಕ್ಕೆ ಸ್ನಾನಕ್ಕೆಂದು ತೆರಳಿದ್ದರು. ಸ್ನಾನ ಮಾಡುತ್ತಿರುವ ಸಮಯ ನದಿ ಬದಿಯ ಗುಡ್ಡ ಏಕಾಏಕಿ ಕುಸಿತಕ್ಕೊಳಗಾಗಿದ್ದು, ಸ್ಥಾನ ಮಾಡುತ್ತಿದ್ದ ನಾಲ್ವರಲ್ಲಿ ಮೂರು ಮಂದಿ ಈಜಿ ದಡ ಸೇರಿದ್ದಾರೆ ಎನ್ನಲಾಗಿದೆ. ಉಜಿರೆಯ ಯುವಕ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದು, ಆತ ಬದುಕಿರುವ ಸಾಧ್ಯತೆ ಕ್ಷೀಣಿಸಿದೆ. ಈಗಾಗಲೇ ಮಣ್ಣಿನಡಿ ಸಿಲುಕಿದ ಯುವಕನನ್ನು ಹೊರತೆಗೆಯಲು ಕಾರ್ಯಚರಣೆ ನಡೆಯುತ್ತಿದೆ.
ಬೃಹತ್ ಗಾತ್ರದ ಬಂಡೆಗಳು ಮರಗಳು ಕುಸಿದು ಬಿದ್ದಿರುವುದರಿಂದ ಹಾಗು ಆ ಜಾಗಕ್ಕೆ ಯಾವುದೇ ರೀತಿಯ ವಾಹನ ಹೋಗದೆ ಇರುವುದರಿಂದ ಕಾರ್ಯಚರಣೆಗೆ ಕಷ್ಟವಾಗಿದೆ. ಯುವಕನ ಪತ್ತೆಗೆ ಬೃಹತ್ ಬಂಡೆಗಳು ಹಾಗೂ ಕೆಸರು ಅಡ್ಡಿಯಾಗಿದ್ದು, ಈಗಾಗಲೇ ಎಸ್.ಡಿ.ಆರ್.ಎಫ್, ಪೋಲಿಸ್ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಸೇರಿಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ಬೇಟಿ ನೀಡಿ ಕಾರ್ಯಾಚರಣೆಯ ಸಮಗ್ರ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು ಈಗಾಗಲೇ ಎಸ್.ಡಿ.ಆರ್.ಎಫ್ ಅಗ್ನಿ ಶಾಮಕ, ಪೋಲಿಸ್ ಇಲಾಖೆ ಹಾಗೂ ಸ್ಥಳೀಯರ ಸಹಾಯದಿಂದ ಶೋದ ಕಾರ್ಯ ನಡೆಯುತ್ತಿದೆ. ದುರ್ಗಮ ಪ್ರದೇಶವಾದ ಕಾರಣ ಯಾವುದೇ ಮಿಷಿನ್ಗಳನ್ನು ಬಳಸಲು ಸಾಧ್ಯವಿಲ್ಲ . ಇದಕ್ಕೆ ಪೂರಕವಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಬೆಳ್ತಂಗಡಿ ಠಾಣೆಯ ಪೊಲೀಸರು, ಸ್ಥಳೀಯ ಗ್ರಾಮಕರಣಿಕರು, ಮಲವಂತಿಗೆ ಗ್ರಾ.ಪಂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.