ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಎಂದಾಕ್ಷಣ ಕೆಲವರಿಗೆ ನೆನಪಾಗುವುದು ಕೋಮುವಾದ, ಪರಸ್ಪರ ದ್ವೇಷ, ಜಾತಿಯಾಧಾರಿತ ಗಲಭೆ. ಆದರೆ, ಧಾರ್ಮಿಕವಾಗಿ ಪ್ರಾಮುಖ್ಯತೆ ಹೊಂದಿರುವ ಈ ಜಿಲ್ಲೆಯ ಕೆಲವುಕಡೆ ಕೋಮು ಸಾಮರಸ್ಯ ಮೇಳೈಸುವ ಘಟನೆಗಳು ನಡೆಯುತ್ತಿರುತ್ತದೆ. ಇದಕ್ಕೆ ಜೀವಂತ ಸಾಕ್ಷಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮ.
ಶ್ರೀಕಾಳಿಕಾಂಬ ದೇಗುಲದ ಪಕ್ಕದಲ್ಲೇ ವಾಸವಾಗಿರುವ ರಮ್ಲಾನ್ ಕಾಳಿಕಾಮಾತೆಯ ಪರಮ ಭಕ್ತನಾಗಿದ್ದು, ಶ್ರೀದುರ್ಗಾ ಕಾಳಿಕಾಂಬ ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಸಾಮರಸ್ಯ ಸಾರುತ್ತಿದ್ದಾರೆ. ಮುಸಲ್ಮಾನನಾದರೂ ದುರ್ಗೆಯ ಆರಾಧನೆಯನ್ನು ಮುಕ್ತ ಮನಸ್ಸಿನಿಂದ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸವಣಾಲಿನದಲ್ಲಿರುವ ಇತಿಹಾಸ ಪ್ರಸಿದ್ಧ ಕಾಳಿಕಾಬೆಟ್ಟದ ಶ್ರೀದುರ್ಗಾ ಕಾಳಿಕಾಂಬ ಕ್ಷೇತ್ರದಲ್ಲಿ ಶ್ರೀಕಾಳಿಕಾಂಬೆಯ ಸ್ತುತಿಯನ್ನು ಅದೇ ಗ್ರಾಮದ ಮುಸ್ಲಿಂ ಸಮುದಾಯದ ರಮ್ಲಾನ್ ರಚಿಸಿ, ಗಾಯನ ಮಾಡಿ ಶ್ರೀಕಾಳಿಕಾಂಬೆಗೆ ಅರ್ಪಣೆ ಮಾಡಿದ್ದಾರೆ. ‘ಮಹಿಮೆದ ಕಾರಣಿಕ ಕ್ಷೇತ್ರ ಕಾಳಿಕಾಬೆಟ್ಟ’ ಎಂಬ ಭಕ್ತಿಗೀತೆ ರಮ್ಲಾನ್ ಸುಂದರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿ ಬಂದಿದೆ. ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಈತ ಹೇಳಿರುವ ದುರ್ಗೆಯ ಕುರಿತಾದ ಗೀತೆಯನ್ನು ಎಸ್.ಕೆ.ಕ್ರಿಯೇಷನ್ ಎಂಬ ಯೂಟ್ಯೂಬ್ ಪೇಜ್ ನಲ್ಲಿ ನೋಡಬಹುದಾಗಿದೆ.
ಸವಣಾಲಿನ ಶ್ರೀ ಕಾಳಿಕಾಂಬ ಕ್ಷೇತ್ರ 1200 ವರ್ಷಗಳ ಇತಿಹಾಸವುಳ್ಳ ಪುಣ್ಯ ಪ್ರಸಿದ್ಧ ಕ್ಷೇತ್ರ. ಸುತ್ತಲೂ ಕಾಡಿನಿಂದ ಆವೃತ್ತವಾದ ನೈಸರ್ಗಿಕವಾಗಿ ಅದ್ಭುತ ಸೌಂದರ್ಯ ಹೊಂದಿದೆ. ದುರ್ಗಾ ದೇವತೆ, ಶ್ರೀಕಾಳಿಕಾಂಬ ದೇವತೆಯನ್ನು ಇಲ್ಲಿ ಪ್ರಧಾನವಾಗಿ ಪೂಜಿಸಲಾಗಿದ್ದು, ಗಣಪತಿ, ಶ್ರೀಧರ ಸ್ವಾಮಿ, ಶಿವ ದಕ್ಷಿಣ ಮೂರ್ತಿ, ರಣಗುಳಿಗ, ಶ್ರೀನಾಗರಾಜ, ಭೈರವರನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಇದೇ ಕಾರಣಿಕ ದೇವಸ್ಥಾನದೆಡೆಗೆ ರಮ್ಲಾನ್ ಅಪಾರ ಭಕ್ತಿಯಿಟ್ಟು ಈ ಗಾಯನ ಸ್ತುತಿಸಿ ಸಾಮರಸ್ಯಕ್ಕೊಂದು ಅಪರೂಪದ ಮೆರುಗು ತಂದಿದ್ದಾರೆ.