ಬೆಳ್ತಂಗಡಿ: ಆನ್ ಲೈನ್ ಮೂಲಕ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ 5.61 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ವಂಚನೆಗೆ ಒಳಗಾದ ಮಹಿಳೆಯನ್ನು ಬೆಳ್ತಂಗಡಿ ತಾಲೂಕಿನ ಕಲ್ಕಣಿ ಜಾನ್ಸ್ ವೀವ್ ನಿವಾಸಿ ರವಿಶಂಕರ್ ಡಿ.ಕೆ. ಅವರ ಪತ್ನಿ ಪೂರ್ಣಿಮಾ ಆರ್ ಎನ್ನಲಾಗಿದೆ.
ಜೂನ್ 28ರಂದು ಅಪರಿಚಿತ ವ್ಯಕ್ತಿಯೊಬ್ಬ ಪೂರ್ಣಿಮಾ ಅವರ ಮೊಬೈಲ್ಗೆ ಕರೆ ಮಾಡಿ ನಾನು ಕಾರ್ತಿಕ್, ಪಾರ್ಟ್ ಟೈಮ್ ಕೆಲಸಕ್ಕೆ ತುರ್ತಾಗಿ ನೇಮಕಾತಿ ಮಾಡುತ್ತಿದ್ದು, ನೀವು ಪ್ರತಿದಿನ 3,000ದಿಂದ 8,000 ರೂ. ವರೆಗೆ ಗಳಿಸಬಹುದು ಎಂದು ಹೇಳಿದ್ದರು.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರ ಪಂಚಮಿ ಆಚರಣೆಗೆ ಜಿಲ್ಲಾಡಳಿತದಿಂದ ವಿಶೇಷ ಆದೇಶ!
ಉದ್ಯೋಗಕ್ಕಾಗಿ ಆನ್ ಲೈನ್ ಮೂಲಕ ಸಂಪರ್ಕಿಸುವಂತೆ ಸಂದೇಶ ಕಳುಹಿಸಲಾಗಿತ್ತು. ಇದನ್ನು ನಂಬಿದ್ದ ಮಹಿಳೆ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿದಾಗ 100 ರೂ. ಜಮೆಯಾಗಿದ್ದು, ಅನಂತರ ಹಂತ ಹಂತವಾಗಿ ಮಹಿಳೆಗೆ ಒಂದೊಂದೇ ಟಾಸ್ಕ್ ನೀಡಿ 8 ಟಾಸ್ಕ್ಗಳ ಮೂಲಕ ಒಟ್ಟು 5,61,537 ಲಪಟಾಯಿಸಿ ವಂಚಿಸಿದ್ದಾನೆ.
ಈ ಘಟನೆಗೆ ಸಂಬಂಧಿಸಿ ಪೂರ್ಣಿಮಾ ಆರ್. ಅವರು ಮಂಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.