ಬೆಂಗಳೂರು: ಜಮೀನಿನಲ್ಲಿ ಜಿಯೋ ಕಂಪನಿ ಸಿಗ್ನಲ್ ಟವರ್ ಅಳವಡಿಸಿ 60 ಲಕ್ಷ ರೂ. ಮುಂಗಡ, 50 ಸಾವಿರ ರೂ. ಬಾಡಿಗೆ ಆಮಿಷವೊಡ್ಡಿ ಭೂ ಮಾಲೀಕನಿಗೇ ಸೈಬರ್ ಕಳ್ಳರು 2.21 ಲಕ್ಷ ರೂ. ವಂಚನೆ ಮಾಡಿದ್ದಾರೆ.
ವಸಂತನಗರದ ವೆಂಕಟರಾವ್ ಮೋಸಕ್ಕೆ ಒಳಗಾದವರು. ಏಪ್ರಿಲ್ 7 ರಂದು ಮೊಬೈಲ್ಗೆ ಬಂದ ಸಂದೇಶದಲ್ಲಿ ಜಿಯೋ ಕಂಪನಿ ಸಿಗ್ನಲ್ ಟವರ್ ಅಳವಡಿಸಲಾಗುತ್ತದೆ. ಮುಂಗಡವಾಗಿ 60 ಲಕ್ಷ ರೂ. ಮತ್ತು ತಿಂಗಳಿಗೆ 50 ಸಾವಿರ ರೂ. ಬಾಡಿಗೆ ಕೊಡುವುದಾಗಿ ಉಲ್ಲೇಖಿಸಲಾಗಿತ್ತು. ಇದನ್ನು ಗಮನಿಸಿದ ವೆಂಕಟರಾವ್, ಎಸ್ಎಂಎಸ್ನಲ್ಲಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿ ಟವರ್ ಅಳವಡಿಸಲು ಒಪ್ಪಿಗೆ ಸೂಚಿಸಿದ್ದರು.
ಸ್ವಲ್ಪ ಸಮಯದ ಬಳಿಕ ವೆಂಕಟರಾವ್ಗೆ ಮತ್ತೊಬ್ಬ ಕರೆ ಮಾಡಿ ಅವರ ಆಧಾರ್ ಕಾರ್ಡ್, ವೋಟರ್ ಐಡಿ, ಪಹಣಿ ಎಲ್ಲವನ್ನು ಮೊಬೈಲ್ನಲ್ಲಿ ಫೋಟೋ ತರಿಸಿಕೊಂಡಿದ್ದ. ಆನಂತರ ಟವರ್ ಅಳವಡಿಸುವುದಾಗಿ ನಂಬಿಸಿ ಕಂಪನಿ ಕಡೆಯಿಂದ ಕರಾರು ಪತ್ರ ಮಾಡಿಸಬೇಕೆಂದು ಹೇಳಿ ಹಂತ ಹಂತವಾಗಿ 2.21 ಲಕ್ಷ ರೂ. ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ಪದೇ ಪದೆ ಹಣ ಕೇಳಿದಾಗ ಅನುಮಾನ ಬಂದು ವಾಪಸ್ ಹಣ ಕೇಳಿದ್ದಾಗ ವಂಚಕರು ಮೊಬೈಲ್ ಸಂಪರ್ಕ ಕಡಿತ ಮಾಡಿದ್ದಾರೆ. ಕೊನೆಗೆ ದಿಕ್ಕು ತೋಚದೆ ವೆಂಕಟರಾವ್, ಠಾಣೆಗೆ ಬಂದು ದೂರು ನೀಡಿದ್ದಾರೆ. ಇದರ ಅನ್ವಯ ಆರೋಪಿಗಳ ವಿರುದ್ಧ ಎಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಕೇಂದ್ರ ವಿಭಾಗ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.