





ಬೆಂಗಳೂರು: ನಾಗಸಾಧುಗಳ ಸೋಗಿನಲ್ಲಿ, ಆಶೀರ್ವಾದ ಮಾಡುವ ನೆಪದಲ್ಲಿ ಬಂದು ಇಬ್ಬರು ವ್ಯಕ್ತಿಗಳು ಚಿನ್ನದ ಉಂಗುರ ಕಳವು ಮಾಡಿರುವ ಘಟನೆ ಬೆಂಗಳೂರಿನ ವಿಜಯನಗರದ ಆರ್ಪಿಸಿ ಲೇಔಟ್ನಲ್ಲಿ ನಡೆದಿದೆ.
ಅರುಣ್ ಶ್ರೀಪಾದ ಎಂಬುವರಿಗೆ ಸೇರಿದ ಸುಮಾರು 12 ಗ್ರಾಂ ಚಿನ್ನದ ಉಂಗುರ ಕಳುವಾಗಿದೆ.
ಘಟನೆಯ ದಿನ ಅರುಣ್ ಶ್ರೀಪಾದ ಅವರ ಕಚೇರಿ ಬಳಿ ಬಂದ ಇಬ್ಬರು ವ್ಯಕ್ತಿಗಳು ನಾಗಸಾಧುಗಳ ವೇಷದಲ್ಲಿ ಕಾಣಿಸಿಕೊಂಡಿದ್ದರು. ತಾವು ಕಾಶಿ, ಅಯೋಧ್ಯೆ ಹಾಗೂ ಗಂಗಾ ಸ್ನಾನ ಮಾಡಿ ಬಂದಿರುವುದಾಗಿ ಪರಿಚಯಿಸಿಕೊಂಡಿದ್ದಾರೆ.
ಬಳಿಕ ತ್ರಿಶೂಲವನ್ನು ಹಣೆಗೆ ಇಟ್ಟು ಆಶೀರ್ವಾದ ಮಾಡಿದ್ದು, ವಿಭೂತಿ ಸಹ ನೀಡಿದ್ದಾರೆ. ಅವರ ಮಾತು ನಂಬಿದ ಅರುಣ್ ಶ್ರೀಪಾದ ಆಶೀರ್ವಾದ ಪಡೆದಿದ್ದಾರೆ.
ನಂತರ ಮನೆಗೆ ಹೋದಾಗ ಕೈಯಲ್ಲಿದ್ದ ಚಿನ್ನದ ಉಂಗುರ ಕಾಣೆಯಾಗಿರುವುದು ಗೊತ್ತಾಗಿದೆ. ಆಗ ಆಶೀರ್ವಾದದ ನೆಪದಲ್ಲಿ ಉಂಗುರ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಅರುಣ್ ಶ್ರೀಪಾದ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.








