


ಬೆಂಗಳೂರು: ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಕಮಿಷನಡ್ ಆಫೀಸರ್ ಆಗಿ ಎಐಸಿಸಿ ರಾಷ್ಟ್ರೀಯ ಸಂಯೋಜಕಿ ಭವ್ಯ ನರಸಿಂಹ ಮೂರ್ತಿ ಅವರು ನಿಯೋಜನೆಗೊಂಡಿದ್ದಾರೆ. ಅವರು ಕಾಶ್ಮೀರದಲ್ಲಿ ಭಾರತ ಪಾಕಿಸ್ಥಾನ ಗಡಿಯ ಬಳಿಯಿರುವ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನಂಟ್ ಆಗಿ ನಿಯೋಜನೆಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭವ್ಯ ನರಸಿಂಹ ಮೂರ್ತಿ ಅವರು, ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಹಾಗೂ 2022 ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿದ್ದೇನೆ ಎಂದು ಹೆಮ್ಮೆಯಾಗುತ್ತಿದೆ. ಇನ್ನು ಮುಂದೆ ನಾನು ದೇಶದ ಒಳಗೆ ರಾಜಕಾರಣಿಯಾಗಿ ನನ್ನ ಜನರ ಸೇವೆ ಮಾಡುವುದರ ಜೊತೆಗೆ ಭಾರತೀಯ ಸೇನಾಧಿಕಾರಿಯಾಗಿ ನನ್ನ ದೇಶ ಕರೆದಾಗ ಗಡಿಯಲ್ಲಿ ದೇಶದ ರಕ್ಷಣೆ ಮಾಡಲೂ ಸಿದ್ಧಳಾಗಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಪ್ರಾದೇಶಿಕ ಸೇನೆಯಲ್ಲಿ ಕೆಲ ಪ್ರಮುಖ ವ್ಯಕ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಲ್ಲಿ ಕ್ರಿಕೆಟ್ ಆಟಗಾರ ಎಂ ಎಸ್ ಧೋನಿ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಅನುರಾಗ ಥಾಕುರ್ ಸೇರಿದ್ದಾರೆ.








